Thursday, December 28, 2017

ಒಂದೂರಿನ ಒಂಚೂರು ಕಥೆ -ಹಂಪಿ

ಯಾಕೋ ಎಲ್ಲಿಗಾದರು ಒಬ್ಬನೇ ಹೋಗಿ ಬರಬೇಕೆನಿಸಿತು.ನನ್ನೊಳಗಿನ ನನ್ನ ಹುಡುಕಲು. ಬದುಕಿಗೆ ಒಂದಷ್ಟು ಹೊತ್ತಿನ ಏಕಾಂತದ ಅವಶ್ಯಕತೆ ಇತ್ತು. ಒಂದಷ್ಟು ಬಟ್ಟೆಗಳನ್ನ  ಬ್ಯಾಗ್ ಗೆ ತುಂಬಿಸಿಕೊಂಡು  ರೈಲ್ ಹತ್ತಿದೆ.

ಈ ವಾರಾಂತ್ಯ ಒಬ್ಬನೆ ಹಂಪಿಗೆ ಹೋಗುತ್ತಿದ್ದೇನೆ ಎಂದಾಗ ಒಂದಷ್ಟು ಜನ ನಗುತ್ತಾ ಅಂದರು " ಅಲ್ಲೇನಿದೆ ? ಬರಿ ಕಲ್ಲು ,ವಿರೂಪಗೊಂಡ ವಿಗ್ರಹಗಳು,ಧ್ವಂಸಗೊಂಡ ದೇವಾಲಯಗಳು. ಈ ಬಿಸಿಲಿಗೆ ಅಲ್ಲಿ ಹೋಗಿ ಏನು  ಮಾಡುವೆ ?". ನನಗೆ ನನ್ನದೇ ಆದ ಕಾರಣಗಳಿದ್ದವು , ಪ್ರತೀ ದಿನ ,ಪ್ರತೀ ವಾರ ಅದೇ ಜನ ಮತ್ತದೇ ಜಾಗ, ಟ್ರಾಫಿಕ್ ನೋಡಿ ಬೇಸತ್ತ ನನಗೆ ಎಂದು ಕಾಣದ ಒಂದು ಊರು , ಎಂದು ಮಾತಾಡದ ಜನಗಳು ಅಲ್ಲಿನ ಇತಿಹಾಸ ಪರಂಪರೆ ನೋಡಬೇಕಿತ್ತುಅದೂ ಅಲ್ಲದೆ ನನ್ನದೊಂದು ಸ್ವಾರ್ಥ ಬೇರೆ ಇತ್ತು "ಎಲ್ಲ ಎಲ್ಲೆಗಳ ಮೀರಿ , ನನ್ನೊಳಗೆ ನಾನಾಗಿ ನನ್ನನ್ನೇ ಹುಡುಕುವ ಪ್ರಯತ್ನ ಅದಾಗಿತ್ತು " ಎನ್ನನ್ನೇ ಹುಡುಕುವ ಮೊದಲು ನೀವು ಏನನ್ನು ಕಳೆದುಕೊಂಡಿರುದು ಅನ್ನುವ ಅರಿವು ನಮಗೆ ಬೇಕು. ಹೌದು ಆ ಅರಿವು ನನಗಿತ್ತು ಅದಕ್ಕಾಗಿಯೇ ಈ ಪ್ರಯತ್ನ. 

ರೈಲು ಸರಿಯಾದ ಸಮಯಕ್ಕೆ ಬಂದು ನನ್ನನ್ನೇ ಕಾಯುತಿತ್ತು,ಮೊದಲೇ ಕಾಯ್ದಿರಿಸಿದ ಸೀಟ್ ನನ್ನ ಬರುವಿಕೆಯ ನಿರೀಕ್ಷೆಯಲ್ಲಿತ್ತು.ನನ್ನ ಹಾಗೆ ಇನ್ನೂ ಹಲವರು ಹಂಪಿ ನೋಡುವ ಹಂಬಲದಿಂದ ಅದೇ ರೈಲು ಹತ್ತಿದ್ದರು. 

ರೈಲು ಜೋರಾಗಿ ಒಮ್ಮೆ ಹಾರ್ನ್ ಮಾಡಿ ರೈಲು ನಿಲ್ದಾಣಕ್ಕೆ ವಿದಾಯ ಹೇಳಿ ಹೊರಟಿತ್ತು. ನಾ ನಿದ್ದೆಗೆ ಜಾರಿದ್ದೆ. 

ಸೂರ್ಯ ತನ್ನ ಮೊದಲ ಬಂಗಾರದ ಬಣ್ಣದ ಕಿರಣಗಳ ಬಿಡುತ್ತಾ ಬೆಟ್ಟದಾಚೆಯಿಂದ ಎದ್ದು ಬರುತಿದ್ದ,ಮತ್ತೊಂದು ಹೊಸ ಬೆಳಗು ಹೊಸ ಊರಿನಲ್ಲಿ. ಹೊಸಪೇಟೆಯಲ್ಲಿ ರೈಲಿನಿಂದ ಇಳಿದು ಹಂಪಿಗೆ ಹೋಗಲು ಬಸ್ ಹಿಡಿಯಬೇಕಿತ್ತು (ಹೊಸಪೇಟೆಯಿಂದ ಸುಮಾರು ೧೮ ಕಿ.ಮೀ ). ಒಂದಷ್ಟು ಜನರ ಗುಂಪು ಬಸ್ ನಿಲ್ದಾಣದ ಕಡೆಗೆ ಚಲಿಸುತ್ತಿತ್ತು ನಾನು ಅವರನ್ನು ಸೇರಿಕೊಂಡೆ. ಅದರಲ್ಲೊಬ್ಬರು ಮಾತಿಗೆ ಇಳಿದರು " ಯಾವ ಊರು ? ಹೆಸರೇನು ಎಂದು ?" ನಾನು ನನ್ನ ವಿವರ ಹೇಳಿದೆ ಮತ್ತು ಅವರನ್ನು ಕೇಳಿದೆ . ಅವರ ಹೆಸರು "ಜ್ವಾಲಾ" ಬೆಂಗಳೂರಿನವರೆ ಅವರು ಹಂಪಿಗೆ   ಒಬ್ಬರೇ ಬಂದಿದ್ದರು ನನ್ನ ಹಾಗೆ " ನೀವು ಕೂಡ ಒಬ್ಬರೇ ಅಲ್ವ ಬನ್ನಿ ಜೊತೆಗೆ ನೋಡೋಣ " ಅಂದರು . ನನಗೇ ಯಾಕೋ ಒಬ್ಬನೇ ಸುತ್ತ ಬೇಕು ಅಂದರೆ ಇವರೇಕೆ ಗಂಟು ಬಿದ್ದರು ಅನಿಸಿತು ಆದರೆ ಯಾಕೋ ನಿರಾಕರಿಸುವ ಮನಸಾಗಲಿಲ್ಲ. ವಯಸ್ಸಿನಲ್ಲಿ ಹಿರಿಯರು ,ನನಗೊ ಹೊಸ ಊರು ,ಜನ ಹಾಗಾಗಿ ಜೊತೆಗಿರಲಿ ಅಂದುಕೊಂಡೆ ಇನ್ನುಳಿದ ಅವರ ಕಥೆ ಕೊನೆಗೆ ಹೇಳುತ್ತೇನೆ. 

ಅದೊ,ಇದೂ ಮಾತಾಡುತ್ತ , ಬಸ್ಸಿನಲ್ಲಿದ್ದ ಒಬ್ಬ ಅದೇ ಊರಿನ ಹಿರಿಯರ ಉಚಿತ ಉಪದೇಶ ಕೇಳುತ್ತ ( ಆ ಉಪದೇಶದ ಬಗ್ಗೆ ಬರೆದರೆ ಅದೇ ಒಂದು ಲೇಖನ ಆಗ ಬಹುದು!!!) ಹಂಪಿ ತಲುಪಿದ್ದೆ. ಒಂದಿಷ್ಟು ಉಪಹಾರ ಮಾಡಿ ಹಂಪಿಯ ಪ್ರಸಿದ್ಧ ತಾಣಗಳ ಕಣ್ತುಂಬಿಸಿ ಕೊಳ್ಳುತಿದ್ದೆ. 

ಹಂಪಿಯ ಇತಿಹಾಸ ಹೇಳುದು ನನ್ನ ಈ ಲೇಖನದ ಉದ್ದೇಶವಲ್ಲದಿದ್ದರು , ಒಂದಿಷ್ಟು ಮಾಹಿತಿ ನೀಡದಿದ್ದರೆ ತಪ್ಪಾದಿತೇನೋ. ಹಂಪಿ ಕರ್ನಾಟಕದ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿದೆ, ಇದು ವಿಶ್ವ ಪಾರಂಪರಿಕ ಕ್ಷೇತ್ರವೆಂದು ಮನ್ನಣೆ ಪಡೆದಿದೆ . ಹಂಪಿ ವಿಜಯನಗರ ಸಾಮ್ರಾಜ್ಯದ ರಾಜಧಾನಿ. ಹಕ್ಕ-ಬುಕ್ಕ ರಿಂದ ಕಟ್ಟಲ್ಪಟ್ಟು ಕೃಷ್ಣದೇವರಾಯ ನಿಂದ ಸಂಭ್ರದ್ದಿಹೊಂದಿ ಬಹಮನಿ ಸುಲ್ತಾನರಿಂದ ಕೊಳ್ಳೆ ಹೊಡೆಯಲ್ಪಟ್ಟ ಸಂಸ್ಥಾನ . ಹಂಪಿಯು ತುಂಗಾಭದ್ರಾ ನದಿಯ ದಂಡೆಯ ಮೇಲೆ ಇದೆ , ಸುತ್ತಲು ಕಲ್ಲು ಬಂಡೆಗಳ ಬೆಟ್ಟಗಳಿಂದ ಸುತ್ತುವರಿದಿದೆ. ಕೆಲವೊಂದು ಮಾಹಿತಿ ಪ್ರಕಾರ ಇದು ರಾಮಾಯಣ ಕಾಲದ ಪಂಪಾ ಕ್ಷೇತ್ರವಾಗಿತ್ತು, ವಾಲಿಯ ಸಾಮ್ರಾಜ್ಯವಾಗಿತ್ತು ಅನ್ನುವ ಪ್ರತೀತಿ ಇದೆ ಇದಕ್ಕೆ ಪೂರಕವಾಗಿ ನದಿಯ ಆ ಬದಿಗೆ  ಅಂದರೆ ಆನೆಗುಂಡಿ ಎಂಬ ಊರಿನಲ್ಲಿ ವಾಲಿಬೆಟ್ಟ, ಅಂಜನಾದ್ರಿ ಬೆಟ್ಟ( ಹನುಮಂತನ ಜನ್ಮಸ್ಥಳ), ಪಂಪ ಸರೋವರ, ಶಬರಿ ರಾಮನಿಗೆ ಕಾದ ಸ್ಥಳ,ಚಿಂತಾಮಣಿ (ರಾವಣ ಸೀತೆಯನ್ನು ಅಪಹರಿಸಿದ ಸುದ್ದಿ ಕೇಳಿ ಚಿಂತೆಯಿಂದ ರಾಮ ಕೂತ ಸ್ಥಳ ) ಹಾಗು ವಾಲೀ- ಸುಗ್ರೀವರು ಯುದ್ಧಮಾಡುವಾಗ ರಾಮ ಮರೆಯಿಂದ ನಿಂತು ಬಾಣ ಬಿಟ್ಟ ಪ್ರದೇಶಗಳಿವೆ, ಹಾಗೆ ಹಂಪಿಯ ಹಲವಾರು ಕೆತ್ತನೆಗಳಲ್ಲಿ ರಾಮಾಯಣದ ಚಿತ್ರಣಗಳನ್ನು ಕಾಣ ಬಹುದು. 

ಬಹಮನಿ ಸುಲ್ತಾನರಿಂದ ಲೂಟಿಯಾಗುವ ಮೊದಲು ಹಂಪಿ ಬಹಳ ಸಂಪತ್ತು ಭರಿತವಾಗಿತ್ತು ಎನ್ನುವ ಉಲ್ಲೇಖಗಳಿವೆ . ಹಂಪಿಯನ್ನು ಆಳಿದ ಪ್ರಸಿದ್ಧ ರಾಜರುಗಳಾದ ಹರಿಹರ , ಹಕ್ಕ-ಬುಕ್ಕರು , ಕೃಷ್ಣದೇವರಾಯ ಮೊದಲಾದವರು ಕಲೆ, ಶಿಲ್ಪಕಲೆ , ಪ್ರಜಾಕ್ಷೇಮ ಕೃಷಿ , ನೀರಾವರಿ , ಕೋಟೆ ದೇವಾಲಯಗಳ ಅಭಿವೃದ್ಧಿಗೆ ಶ್ರಮಿಸಿರುದು ಕಂಡು ಬರುತ್ತದೆ, ಅದಕ್ಕೆ ಸಾಕ್ಷಿಯಾಗಿ ಅಳಿದುಳಿದ ದೇವಾಲಯಗಳು , ವಿರೂಪಗೊಂಡ ವಿಗ್ರಹಗಳು , ಪಾಳುಬಿದ್ದ ಸಂತೆಯ ಕಲ್ಲುಗಳು ಇತಿಹಾಸ ಹೇಳುತ್ತಾ ನಿಂತಿವೆ . 

ಹಂಪಿಯ ಪ್ರಮುಖ ದೇವಾಲಯವಾದ  ವಿರೂಪಕ್ಷ ದೇವಸ್ಥಾನದಲ್ಲಿ ಈಗಲೂ ದಿನ ನಿತ್ಯ ಪೂಜೆ ನಡೆಯುತ್ತಿದೆ. ಊರ ಜನರೆಲ್ಲ ಸೇರಿ ಪ್ರತೀ ವರ್ಷ ಜಾತ್ರೆ ನಡೆಸುತ್ತಾರೆ. ಇಲ್ಲಿಯ ಇತರ  ಪ್ರಮುಖ ದೇವಾಲಯಗಳಾದ ಸಾಸಿವೆ ಕಾಳು ಗಣಪತಿ,ಕಡಲೆ ಕಾಳು ಗಣಪತಿ , ಶ್ರೀ ಕೃಷ್ಣ ದೇವಾಲಯ,ಉಗ್ರ ನರಸಿಂಹ ದೇವಾಲಯ ಭೂಮಿಯೊಳಗೆ ಕಟ್ಟಲ್ಪಟ್ಟ ಶಿವ ದೇವಾಲಯಗಳಳ್ಳಿ ಯಾವುದೇ ಪೂಜೆ ನಡೆಯುತ್ತಿಲ್ಲ (ಕೆಲವೊಂದರಲ್ಲಿ ವಿಗ್ರಹಗಳೇ ಇಲ್ಲ ಮತ್ತು ಅಳಿದುಳಿದ ಕೆಲವು ವಿಗ್ರಹಗಳು ವಸ್ತು ಸಂಗ್ರಾಲಯದಲ್ಲಿದೆ). 

ಹಂಪಿಯ ಕೆಲವು ಆಕರ್ಷಣೀಯ ಸ್ಥಳಗಳು :

ವಿರೂಪಾಕ್ಷ ದೇವಾಲಯ 
ಹೇಮಕೂಟ 

ಶಿಥಿಲಾವಸ್ಥೆಯಲ್ಲಿರುವ ಸೂಳೆ ಬಜಾರ್ 

ಲಕ್ಷ್ಮಿ ಮತ್ತು ತನ್ನ ಸ್ವಂತ ಕೈಗಳನ್ನು ಕಳೆದುಕೊಂಡಿರುವ ಉಗ್ರ ನರಸಿಂಹ 
ಭೂಮಿಯೊಳಗೆ ಕಟ್ಟಿರುವ ಶಿವ ದೇವಾಲಯ (ಪಾತಾಳೇಶ್ವರ ದೇವಾಲಯ)

ಲೋಟಸ್ ಮಹಲ್ 


ಲೋಟಸ್ ಮಹಲ್ 


ಆನೆಗಳನ್ನು ಕಟ್ಟಿಡುತಿದ್ದ ಸ್ಥಳ 


ರಂಗನಾಥ ದೇವಾಲಯ 

ಮಹಾನವಮಿ ದಿಬ್ಬ 


ಅಳಿದುಳಿದ ಅವಶೇಷಗಳು 


ವಿಠ್ಠಲ ದೇವಾಲಯ 

ಹಜಾರ ರಾಮ ದೇವಾಲಯದ ಹೊರ ಗೋಡೆಯಲ್ಲಿನ ಕೆತ್ತನೆಗಳು 

ಹಜಾರ ರಾಮ ದೇವಾಲಯ


ರಾಣಿಯ ಸ್ನಾನ ಗ್ರಹ 


ರಾಣಿಯ ಸ್ನಾನ ಗ್ರಹ (ಒಳಾಂಗಣ)



ವಿಶ್ವ ಪ್ರಸಿಧ್ಧ ಕಲ್ಲಿನ ರಥ 



ಅಂಜನಾ ಪರ್ವತ ಹನುಮಂತನ ಜನ್ಮಸ್ಥಳ 


ಚಿಂತಾಮಣಿ 


ತುಂಗಾ-ಭದ್ರ ಆಣೆಕಟ್ಟು 


ಅಂಜನಾ ಪರ್ವತದಿಂದ ಸೂರ್ಯಾಸ್ತಮಾನದ ದೃಶ್ಯ 


ಅಂಜನಾ ಪರ್ವತದಿಂದ ಹಂಪಿಯ ನೋಟ 


ಅಂಜನಾ ಪರ್ವತದಿಂದ ಹಂಪಿಯ ನೋಟ


ಅಂಜನಾ ಪರ್ವತದಿಂದ ಹಂಪಿಯ ನೋಟ


ಹಂಪಿಯಲ್ಲಿ ಬರಿ ಇಷ್ಟೇ ಅಲ್ಲ ಹಲವಾರು ಸ್ಥಳಗಳಿವೆ. ಸಾಸಿವೆ ಕಾಳು , ಕಡಲೆ ಕಾಳು ಗಣಪತಿ , ಮತಾಂಗ ಪರ್ವತ , ಋಷಿಮುಖ ಪರ್ವತ , ಪಂಪಾ ಸರೋವರ ಮತ್ತು  ಕೃಷ್ಣ ದೇವಾಲಯ ಇನಿತರ ಪ್ರಮುಖವು . 


ಎರಡು ದಿನ ಹಂಪಿಯೆಲ್ಲ ಸುತ್ತಾಡಿ ಕೊನೆಗೆ ಬಂದು ಅಂಜನಾ ಪರ್ವತದ ೫೭೫ ಮೆಟ್ಟಿಲುಗಳನ್ನು ಹತ್ತಿ ಮೇಲೆ ಬಂದು ಕೂತೆ , ನನಗೊಮ್ಮೆ ಪೂರ್ತಿ ಹಂಪಿಯನ್ನು ಒಟ್ಟಿಗೆ ನೋಡಬೇಕಿತ್ತು . ಕಣ್ಣು ಮುಚ್ಚಿಕೊಂಡು ಒಂದುಕ್ಷಣ ಯೋಚಿಸಿದೆ "ಈಗಲೇ ಹಂಪಿ ಹೀಗೆ ಇದೆ ಇನ್ನು ನೂರಾರು ವರುಷಗಳ ಹಿಂದೆ ಎಲ್ಲ ವೈಭವಗಳ ತುಂಬಿಕೊಂಡಾಗ ಹೇಗಿರಬಹುದಿತ್ತು ?" ಯಾಕೋ ತುಂಬಾ late ಆಗಿ ಹುಟ್ಟಿದೆ ಅನಿಸಿದ್ದು ಸುಳ್ಳಲ್ಲ.ಸೂರ್ಯ ಮೆಲ್ಲನೆ  ಅಂಜನಾ ಪರ್ವತ ಇಳಿಯುತ್ತಿದ್ದ , ಅಂದು ಹಂಪಿ ಲೂಟಿಯಾದಾಗ ಬಹುಶ ಸೂರ್ಯ ನೋಡಲಾಗದೆ ಬಹುಶ ಬೇಗನೆ ಮುಳುಗಿರಬೇಕು ಅಂದುಕೊಂಡೆ.

ಒಂದು ಸಾಮ್ರಾಜ್ಯ ಪತನವಾಗಿ ಅದು ಹೇಗೆ ಬರಿಯ ಇತಿಹಾಸವಾಗುತ್ತದೆ ಎಂಬುದ ತಿಳಿಯಬೇಕಾದರೆ ಹಂಪಿ ನೋಡಬೇಕು . ಹಂಪಿ ಎಲ್ಲ ಇದ್ದು ಎಲ್ಲವನ್ನು ಕಳೆದುಕೊಂಡ ನತದೃಷ್ಟ ಸಾಮ್ರಾಜ್ಯ. ಸದ್ಯಕ್ಕೆ ಹಂಪಿಯ ಮಟ್ಟಿಗೆ ಹೇಳಬೇಕಾದರೆ , ಸರಕಾರ ಸ್ವಲ್ಪ ಕಾಳಜಿವಹಿಸಿಕೊಂಡು ಅಳಿದುಳಿದ ಅವಶೇಷಗಳನ್ನು ರಕ್ಷಿಸುವ ಕೆಲಸಮಾಡಿದೆ . ಹಲವಾರು ಭಗ್ನಗೊಂಡ ಮೂರ್ತಿಗಳು, ಇನ್ನಿತರ ಇತಿಹಾಸದ ಪುರಾವೆಗಳನ್ನು  ವಸ್ತು ಸಂಗ್ರಹಾಲಯದಲ್ಲಿ ಇಟ್ಟು ಕಾಪಾಡಲಾಗಿದೆ. ಸ್ವಚ್ಛತೆ ಹಂಪಿಯನ್ನು ಕಾಡುತ್ತಿದೆ , ಪ್ರವಾಸಿಗರಿಗೆ ಸೂಕ್ತವಾದ ಅನುಕೂಲಗಳನ್ನು ಕಲ್ಪಿಸಿಕೊಡಬೇಕಾಗಿದೆ . ಪಾಳುಬಿದ್ದ ಕೆಲವೊಂದು ಸಣ್ಣ ಪುಟ್ಟ ಕಲ್ಲಿನ ಮಂಟಪಗಳನ್ನು ಅಂದಗೊಳಿಸಿ ಮುಂದಿನ ಪೀಳಿಗೆಗೆ ಕಾಪಾಡಬೇಕಿದೆ. 

"ಕಲೆ ಶಿಲ್ಪಕಲೆ , ಸಾಹಿತ್ಯ ಇನ್ನಿತರ ಸಂಸ್ಕೃತಿಗಳ ಹೊಂದಿರುವ ಶ್ರೀಮಂತ ದೇಶ ನಮ್ಮದು , ಅದನ್ನೆಲ್ಲ ಸರಿಯಾಗಿ ಕಾಪಾಡಲಾಗದ ಬಡವರು ನಾವು."

ಪಾಳುಬಿದ್ದದು, ಶಿಥಿಲವಾದದ್ದು ಹಂಪಿಯಲ್ಲ , ನಮ್ಮ ಮನಸ್ಸು.ನಮ್ಮದೇ ಇತಿಹಾಸದ ಕಡೆ ನಾವು ನೋಡುವ ದೃಷ್ಟಿಕೋನ. ಕೆಲವರಂತು ಅಮರ ಶಿಲ್ಪಿಗಳು (ಅಮರ ಪ್ರೇಮಿಗಳು ) ಅಲ್ಲಲ್ಲಿ ಗೋಡೆಗಳಲ್ಲಿ ತಮ್ಮ ಜಂಟಿ ಹೆಸರುಗಳನ್ನು ಕೆತ್ತಿದ್ದಾರೆ, ತಮ್ಮ ಕೈಯಲ್ಲಿ ಆಗೂದಿಷ್ಟೇ ಎಂಬುದನ್ನು ಸಾಬೀತು ಪಡಿಸಲು !!. 

ಹಂಪಿಯಿಂದ ಆನೆಗುಂದಿಗೆ ಬಸ್ ಹತ್ತಿದ್ದೆ . ಯಾರೋ ಜೊತೆಗೆ ತಂದ ಮೂಟೆಯನ್ನು ಬಸ್ ಒಳಗೆ ಹಾಕಲು ಹೆಣಗಾಡುತಿದ್ದರು " ರೀ ನಿಮಗೆ ಆಗಲ್ಲ ಬಿಡಿ , ಈ ಕಡೆ ಕೊಡಿ ನಾನೇ ಎತ್ತಿ ಮೇಲೆ ಹಾಕುತ್ತೇನೆ " ಎಂದು ಇನ್ನೊಬ್ಬರು ಸಹಾಯ ಹಸ್ತ ಚಾಚಿದರು , ಅದಕ್ಕೆ ಆ ಹಿರಿಯ ಮಹಾನುಭಾವರು ಒಂದು ಮಾತು ಹೇಳಿದರು " ಎಂತೆಂತ ಬಂಡೆ ಕಲ್ಲುಗಳ ಕೆತ್ತಿ ಅಷ್ಟೆಲ್ಲ ಎತ್ತರಗಳಲ್ಲಿ ಯಾವುದೇ ಯಂತ್ರಗಳ ಸಹಾಯವಿಲ್ಲದೆ ನಮ್ಮ ಹಿರಿಯರೆಲ್ಲ ಎತ್ತಿ ಇಟ್ಟಿದ್ದಾರೆ , ಇದೆಲ್ಲ ಯಾವ ಮಹಾ ". ಅವರ ಆ ಮಾತುಗಳಲ್ಲಿ ಒಂದು ಅಭಿಮಾನವಿತ್ತು, ನಮ್ಮ ಪೂರ್ವಜರ ಕೌಶಲ್ಯದ ಬಗ್ಗೆ ಹೆಮ್ಮೆ ಇತ್ತು. ನಮಗೆ ಈಗ ಬೇಕಾಗಿರುದು ಅದೇ . ವಾಟ್ಸಪ್ಪ್ , ಫೇಸ್ಬುಕ್ ಮತ್ತಿತರ ಸಾಮಾಜಿಕ ಜಾಲತಾಣಗಲ್ಲಿ ಬಂದಿಯಾದ ನಮಗೆ ಮತ್ತೆ ಇಂತಹ ಅಭೂತಪೂರ್ವ ಇತಿಹಾಸ ನಿರ್ಮಿಸಲು ಸಮಯವೆಲ್ಲಿದೆ !!!?

ಕೆಲವರಂತು ಕೇಳಿದರು ಒಬ್ಬನೆ ತಿರುಗಾಡಿ ಏನು ಮಾಡಿದೆ?. ನಾನೆಲ್ಲಿ ಒಂಟಿಯಾಗಿದ್ದೆ ? ಎರಡು ದಿನದಲ್ಲಿ ನನಗೆ ಹಾಗೆ ಎಂದು ಅನ್ನಿಸಲೇ ಇಲ್ಲ. ಯಾರದೋ ಪುಟ್ಟ ಮಗು (ಬೀದಿ ಬದಿಯ ಕೆಲಸ ಮಾಡುವ ) ನನ್ನ ಕನ್ನಡಕ ಹಾಕಿಸಿಕೊಂಡು ನನ್ನ ಜೊತೆ ಫೋಟೋ ತೆಗೆಸಿಕೊಂಡಿತು. ಅದಕ್ಕೆ ಆ ಫೋಟೋ ತೋರಿಸಿದಾಗ ಅದರ ಮುಖದಲ್ಲಿನ ಆ ನಗು ಬಹುಶ ಬೇರೆಲ್ಲೋ ಸಿಗುದು ಕಷ್ಟ . ಯಾರೋ ಬೀದಿಯ ಮಕ್ಕಳ ಜೊತೆ ಕೂತು ಒಂದಷ್ಟು ತಿಂಡಿ ತಿಂದೆ. ಆಟೋ ಚಾಲಕನೊಬ್ಬ " ಸರ್ ಅಲ್ಲಿ ಹೋಗಿ , ಇಲ್ಲಿಂದ ಅಲ್ಲಿ ಹೋಗಿ " ಎನ್ನುತ್ತಾ ಹೋದಲ್ಲೆಲ್ಲ ಸಿಗುತ್ತಾ ದಾರಿ ಹೇಳುತಿದ್ದ . ಊರ ಯಾರೋ ಹಿರಿಯರೊಬ್ಬರು ಚಿಂತಾಮಣಿಯ ಕಥೆ ಹೇಳಿದ್ದರು , ಹೀಗೆ ಪಟ್ಟಿ ದೊಡ್ಡದಿದೆ. ಇದಕ್ಕಿಂತ ಮಿಗಿಲಾಗಿ ಹಂಪಿಯ ಒಂದೊಂದು ಕಲ್ಲು ಇತಿಹಾಸದ ವೈಭವ, ಕ್ರೌರ್ಯ ಹೇಳುತಿತ್ತು. 

 "ಜ್ವಾಲಾ"

ಸುಮಾರು ೬೦ ಆಸುಪಾಸಿನೊಳಗಿನ ಹಿರಿಯ ವ್ಯಕ್ತಿ, "ಅಂಕಲ್ ನೀವು  ಹೇಗೆ ಹಂಪಿಗೆ ಬಂದದ್ದು?". ದಿನವಿಡೀ ಒಟ್ಟಿಗೆ ಸುತ್ತಾಡಿ ಒಂದು ಆತ್ಮೀಯತೆ ಮೂಡಿತ್ತು ಕುತೂಹಲದಿಂದ ಕೇಳಿದೆ . ನನ್ನ ಕುತೂಹಲಕ್ಕೆ ಕಾರಣವಿತ್ತು, ಅಂಕಲ್ ಕೈಯಲ್ಲಿ ಯಾವುದೇ ಬ್ಯಾಗ್ ಇರಲಿಲ್ಲ ಹಂಪಿಗೆಂದೇ ಬಂದವರಲ್ಲ .ಕೈಯಲ್ಲೊಂದು ಪ್ಲಾಸ್ಟಿಕ್ ಚೀಲ ಅದರಲ್ಲಿ ಕೆಲವು ಕಾಗದ ಪಾತ್ರಗಳು ಜೊತೆಗೊಂದು ಲುಂಗಿ ಇಷ್ಟೇ ಇದ್ದದ್ದು . "ನಾನು ಬೇರೆ ಎಲ್ಲೋ ಹೋಗಬೇಕಿತ್ತು" ಬೆಂಗಳೂರಿಂದ ಅಲ್ಲೇ ಸುಮಾರು ೮೦ ಕಿ.ಮೀ ಒಳಗೆ ರೈಲ್ ತಪ್ಪಿ ಹೊಯುತು ಏನು ಮಾಡಲಿ ಎಂದು ಹಾಗೇ ನಿಲ್ದಾಣದಲ್ಲಿ ಕೂತಿದ್ದೆ , ಹಂಪಿಗೆ ಹೋಗುವ ರೈಲುಗಾಡಿ ಬಂತು ಟಿಕೆಟ್ ತೆಗೆದುಕೊಂಡು ಹತ್ತಿ ಕೂತೆ . ನನಗೊ ಒಮ್ಮೆ ಹಂಪಿ ನೋಡಬೇಕಿತ್ತು  ಹಾಗೆ ಬಂದೆ . ಬೆಳಗ್ಗೆ ಮನೆಗೆ ಫೋನ್ ಮಾಡಿ ನಾನು ಹಂಪಿಯಲ್ಲಿದ್ದೇನೆ ಫೋನ್ ನಲ್ಲಿ ಚಾರ್ಜ್ ಇಲ್ಲ ಸಂಜೆ ವಾಪಾಸ್ ಬರುತ್ತೇನೆ ಎಂದು ಹೇಳಿ ಫೋನ್ ಸ್ವಿಚ್ ಆಫ್ ಮಾಡಿ ಒಂದು ದಿನವಿಡಿ ನನ್ನ ಜೊತೆಗಿದ್ದರು.  

ವಿಧಿ ಯಾರನ್ನು ಎಲ್ಲಿ ಎಲ್ಲಿ ಜೊತೆಯಾಗಿಸುತ್ತದೆ. ಪಯಾಣದ ನಡುವೆ ಯಾರೋ ಸಿಕ್ಕವರು ಅದೆಷ್ಟು ಆತ್ಮೀಯರಾಗಿ ಬಿಡುತ್ತಾರೆ. ಮೊನ್ನೆ ಹಂಪಿಯಿಂದ ಬಂದ ಮೇಲೆ ಕೆಲವು ದಿನದ ನಂತರ ಫೋನ್ ಮಾಡಿದೆ ಯೋಗಕ್ಷೇಮ ಕೇಳಲು . ಅವರ ಪ್ರೀತಿ ಅಭಿಮಾನ ಮರೆಯುದು ಕಷ್ಟ. 

"ನಾನೇಕೆ ಹಂಪಿಗೆ ಹೋದೆ ?"

ಕೆಲವು ತಿಂಗಳ ಹಿಂದೆ ನಾ ಯಾವುದೋ ಬೆಟ್ಟ , ಅಳಿದುಳಿದ ಕಲ್ಲಿನ ಕೆತ್ತನೆಗಳ ಅವಶೇಷಗಳ ನೋಡುತ್ತಾ ಅಳೆಯುತ್ತಿದ್ದೆ . ಅದು ಕನಸು ಒಂದಿಷ್ಟೇ ನೆನಪಿತ್ತು. ಬೆಳಗ್ಗೆ ಎದ್ದಾಗ ಆ ತರದ ಜಾಗಕ್ಕೆ ಹೋಗಬೇಕೆನಿಸಿತು . ಬಹುಶ ಕನಸು ಪೂರೈಸಿಕೊಳ್ಳಲು ಹಂಪಿಗಿಂತ ಒಳ್ಳೆಯ ಜಾಗ ಸಿಗುದು ಕಷ್ಟ.!!!. 


"ಹಂಪಿ ಆಯಿತು ಮುಂದೆ....... ?"

ಕನ್ಯಾಕುಮಾರಿ ಕರೆಯುತ್ತಿದ್ದಾಳೆ, ಹೋಗಿ ಬಂದು ಮತ್ತೆ ಬರೆಯುತ್ತೇನೆ. 

ಧನ್ಯಾವಾದಗಳೊಂದಿಗೆ 

ಸುಕೇಶ್ ಪೂಜಾರಿ 













Saturday, November 4, 2017

ಎರಡು ನೆರಳು

ನಾನು ನಾನಾಗದಿರುವಾಗ 
ನನ್ನೊಳಗೆ ನಾನ್ಯಾರು ?
ಪ್ರಶ್ನೆಗಳ ವರ್ತುಲ 
ಉತ್ತರದ ಕೈಚೀಲ 
ತಡಕಾಡಿದಸ್ಟು 
ಮುಗಿಯದ ಗೊಂದಲ. 

ಸುಮ್ಮನೆ ಕುಳಿತು 
ನನ್ನ ಹಿಂದೆ ನಾನೇ ಅವಿತು 
ಆಡಿಕೊಂಡ ಆಟ 
ಕಣ್ಣಾಮುಚ್ಚಾಲೆಯಂತೂ ಅಲ್ಲ,
ಬಣ್ಣದ ಮುಖವಾಡ 
ಮಾಸಿಹೋಗಬಹುದೆಂಬ 
ಭಯಕ್ಕೆ 
ಬೆದರಿ,ಬೆವರಿ ಒಂದಷ್ಟು 
ನಾ ಕಂಡರೆ, ಕ್ಷಮಿಸಿ 
ನಾ ಅವನಲ್ಲ. 

ಕುಣಿಕೆಯ ಕೊನೆಗೆ 
ನಾ ಅಲ್ಲದ ನನ್ನ 
ನೇತಾಡಿಸಿ,ನರಳಿಸಿ 
ಮುಗಿಸಿಬಿಟ್ಟರೆ?
ನೀವು ಪರಿಚಯದ 
ನಗೆ ಬೀರುದು ಹೇಗೆ?
ನನ್ನ ಬಿಟ್ಟ ನಾನು 
ನಿಮಗೆ ಅಪರಿಚಿತ 
ನನಗಷ್ಟೇ ಚಿರಪರಿಚಿತ. 

ಒಂದು ದಿನ ನೀವು,
ಹಠ ಹಿಡಿದು 
ನನ್ನೊಳಗಿನ ನನ್ನ 
ಹುಡುಕ ಹೊರಟರೆ?
ನಾನಲ್ಲದ ನನ್ನ 
ನಾನೇ ಆವರಿಸಿ,
ನಿಮ್ಮನ್ನೆಲ್ಲ ಯಾಮಾರಿಸಿ 
ಸದ್ದೇ ಮಾಡದೆ ಎದ್ದು ಹೋಗುವೆ. 
ಆಗ ನೀವು,
ನಿಮ್ಮೊಳಗಿನ ನಿಮ್ಮ ಹುಡುಕಿಕೊಳ್ಳಿ. 

ನಾನು ನಾನಾಗಿರುವಾಗ 
ನನ್ನೊಳಗೆ ಮತ್ತೆ ನೀನ್ಯಾರು?. 
ನನಗೆ ಎರಡು ನೆರಳು 
ಒಂದು ನನ್ನದು,
ಇನ್ನೊಂದು ನನ್ನದೇ.!!
ಪ್ರಶ್ನೆಗಳಿಗುತ್ತರ 
ಲೀಲಾಜಾಲ,
ಎಲ್ಲ ನನ್ನೊಳಗಿನ ನನ್ನ 
ಮಾಯಾಜಾಲ. 

------------------------------------------------------------------ಸುಕೇಶ್ ಪೂಜಾರಿ 
 

Saturday, October 28, 2017

ಚುಟುಕುಗಳು- ಕನ್ನಡ ರಾಜ್ಯೋತ್ಸವಕ್ಕೆ

                   ೧

ಬೆಂಗಳೂರಿನಲ್ಲಿ ಕನ್ನಡ 

ಬೆಂಗಳೂರಿನಲ್ಲಿ ಕನ್ನಡ
ಕನ್ನಡಿಯೊಳಗಿನ
ಚಿನ್ನದ ಗಂಟು.
ಹೊರಗು
ಅಳಿದುಳಿದದ್ದು
ಅಲ್ಪ ಸ್ವಲ್ಪ ಅಲ್ಲಲ್ಲಿ ಉಂಟು.


ಪರ ರಾಜ್ಯದ ಕನ್ನಡಿಗರು 

ಮೊನ್ನೆ ಪರ ರಾಜ್ಯದವರೊಬ್ಬರು
ಅರ್ಧಂಬರ್ಧ ಕನ್ನಡದಲ್ಲಿ
ಮಾತಾಡಲು ಶುರುವಿಟ್ಟರು,
ಖುಷಿಯಿಂದ ಹೇಳಿದೆ
ಈ ಬಾರಿಯ ರಾಜ್ಯೋತ್ಸವ
ಪ್ರಶಸ್ತಿ ನಿಮಗೇ ಕೊಟ್ಟಾರು!!



ಕಾನ್ವೆಂಟ್ ನ ಕಂದ 

ಕಾನ್ವೆಂಟಿಗೆ ಸೇರಿಸುವಾಗ
ಕಂದನ ಕೇಳಿದರು,
"ನಿನಗೆ ಇಂಗ್ಲಿಷ್ ಗೊತ್ತಾ ?"
ಇಲ್ಲವೆಂದು ತಲೆಯಾಡಿಸಿದ
ಕನ್ನಡದ ಪೋರ,
"ಸರಿ ನಾವು ಕಳಿಸಿ ಕೊಡುತ್ತೇವೆ"
"ನಿನಗೆ ಕನ್ನಡ ಗೊತ್ತೇ ?"
ಹೌದೆಂದ ಹೆಮ್ಮೆಯಿಂದ.
"ಸರಿ ನಾವು ಮರೆಸಿ ಬಿಡುತ್ತೇವೆ" .


ಕನ್ನಡದ ಮೇಲೆ ಕಾಗೆ, ಗೂಬೆ 

ಮೊನ್ನೆ ಹೀಗೆ
ಕಾಗೆ
ಕನ್ನಡದ ಬಾವುಟದ
ಕಂಬದಲ್ಲಿ ಕೂತಿತ್ತು,
ಓಡಿಸಲು ಕಲ್ಲೆಸೆದೆ
ಮಿಟುಕಾಡಲಿಲ್ಲ .
ಸುತ್ತ ಜನ ಸೇರಿದರು
ಕನ್ನಡದ ಬಾವುಟಕ್ಕೆ
ಕಲ್ಲೆಸೆದು
ಅವಮಾನ ಮಾಡಿದೆನೆಂದರು,
ಕೋರ್ಟು ಮುಂದೆ ನಿಂತೆ .
"ಬಾವುಟದ ಮೇಲೆ ಕುಳಿತ
ಕಾಗೆ ಓಡಿಸುತಿದ್ದೆ ಜನ ತಪ್ಪು ತಿಳಿದರು " ಅಂದೆ .

ತಕ್ಕಡಿ ನನ್ನ ಕಡೆ ತೂಗಿತು
"ಸರಿ ಆ ಕಾಗೆಯನ್ನು ಹಿಡಿದು ತನ್ನಿ"
ನಗುತ್ತಾ ಆಜ್ಞಾಪಿಸಿದರು
ಜಡ್ಜ್ ಸಾಹೇಬರು .

"ನೀವು ಬನ್ನಿ ಕಾಗೆ ಓಡಿಸುದು ತಪ್ಪಲ್ಲ"

ಪುಸ್ತಕದ ಅಂಗಡಿಯಲ್ಲಿ

ಒಂದು ಕನ್ನಡ ಪುಸ್ತಕ ಕೊಡಿ,
ಇನ್ನಾದರೂ ಶುರುಮಾಡೋಣ
ಓದಲು
ನಮ್ಮ ನಾಡು ನುಡಿ.


ಕನ್ನಡಿಗ 
ಗೊತ್ತೇ ನಿನಗೆ
ಕುವೆಂಪು, ಮಾಸ್ತಿ,ಅಡಿಗ?
ಗೊತ್ತಿಲ್ವೆ ?
ನೀ ಯಾವ ಸೀಮೆ ಕನ್ನಡಿಗ!!!



---------------------------------------------------------------------ಸುಕೇಶ್ ಪೂಜಾರಿ 



Saturday, September 9, 2017

ಹೀಗೊಂದು ಸ್ವಗತ

ನೆನಪು ಅರ್ಧ ಬೆಂದ ಜೋಳ
ಮನಸು ಹಸಿದ ತೋಳ
ಬದುಕು ತಳ್ಳೋ ಗಾಡಿ
ಎದೆಯಲ್ಲಿ ನಿಗಿ ನಿಗಿ ಕೆಂಡ, ಕಿಡಿ
ಯಾರೋ ಮೆಲ್ಲಗೆ
ಗಾಳಿ ಹಾಯುತಿದ್ದಾರೆ

ಗಾಡಿ ಸುತ್ತ ನಿಂತ ಜನ
ಜಾತ್ರೆಯಂತೂ ಅಲ್ಲ
ಇಲ್ಲಿ ಸುಟ್ಟ ನೆನಪುಗಳಿಗೆ
ಬೇಡಿಕೆ ಜಾಸ್ತಿ
ಕೆಲವರಂತೂ
ಉಪ್ಪು-ಖಾರ ಹಚ್ಚಿಕೊಳ್ಳುತ್ತಾರೆ.
ಹೊಗೆ ನೆಪ,
ಸುಟ್ಟುಕೊಳ್ಳಲು ಕಾರಣ
ಅದು ನನ್ನ ಮೇಲಿನ ಕೋಪ.

ಜನ ದೂರ ಹೋದಾಗ
ಕೂಗಿ ಕರೆಯೋಣವೆಂದುಕೊಂಡೆ
ತಳ್ಳೋ ಗಾಡಿಯ ಕೀರಲು ಶಬ್ದಕ್ಕೆ
ನನ್ನ ಬೊಬ್ಬೆ ಯಾರಿಗೂ ಕೇಳಲೇ ಇಲ್ಲ
ಕೆಲವರದಂತೂ
ಕಿವುಡತೆಯ ನಾಟಕಕ್ಕೆ,
ನಾನು ಬಯಲು ರಂಗಮಂದಿರ.

ಮೇಲೆ ಯಾಕೋ ಮೋಡ
ಅಳಲು ಶುರುಮಾಡುದರಲ್ಲಿತ್ತು.
ಕಿಡಿ ಆರುವ ಹೊತ್ತು
ಪಕ್ಕದಲ್ಲಿ ಯಾರೋ
ಹಾಗೇ ನಡೆದು ಹೋದ ಹಾಗಿತ್ತು
ಮತ್ತೆ ತಿರುಗಿ ನೋಡದೆ.
ಖಾಲಿ ಗಾಡಿ ,
ಎಂದಿಗಿಂತ ಸ್ವಲ್ಪ ಹಗುರ,
ಹೆಜ್ಜೆ ಯಾಕೋ ಕೊಂಚ ಭಾರ. 

ನೆನಪು ಅರ್ಧ ಬೆಂದ ಜೋಳ
ಮನಸು ಹಸಿದ ತೋಳ
ಬದುಕು ತಳ್ಳೋ ಗಾಡಿ
ತಳ್ಳುತಿದ್ದೇನೆ ಮತ್ತೆ ಪ್ರಯತ್ನ ಮಾಡಿ!!!.




----------------------------------------------------------ಸುಕೇಶ್




Friday, August 11, 2017

ಹೃದಯ

          
ಒಂದೊಮ್ಮ,
ವೈಭವದ ಹಂಪಿ. 
ಕೋಟೆ ಕೊತ್ತಲಗಳ 
ಸುತ್ತಲಲ್ಲಿ ಜನ. 
ಸಂಗೀತ,ಮಾಧುರ್ಯ 
ಮೆರವಣಿಗೆ,
ಕವಿಯ ಬರವಣಿಗೆ,
ಸಿಂಹಾಸನದ ಗಾಂಭಿರ್ಯ,
ಎಲ್ಲ ಗೆದ್ದ ಹಮ್ಮು,
ಸಹಜತೆಯ ಮಾಚಿ 
ಒಳೊಗೊಳಗೆ ನಾಚಿ 
ಸಂಭ್ರಮದ ಹಾಳೆಗಂಟಿದ 
ಸುಂದರ ತೈಲ ಚಿತ್ರ. 


ಈಗ,  
ಕಳಚಿದ ಕಂಬ 
ಹಳೇ ಸ್ಮಾರಕ 
ಆಗೊಮ್ಮೆ ಈಗೊಮ್ಮೆ 
ಬಂದು ಹೋಗುವ ಜನ,
ಇತಿಹಾಸದ ಮೆಲುಕು,
ಪ್ರತಿ ಪುಟದಲ್ಲು ಹುಳುಕು.  
ಕುಹಕಗಳ ಪಿಸುಮಾತು 
ಅರ್ಧ ಬಿದ್ದ ಗೋಡೆಗಳಲ್ಲಿ 
ಪ್ರತಿದ್ವನಿ. 
ಯಾರೋ ಅರ್ಧ ಬರೆದ ಚಿತ್ರ 
ನೆನಪು ಮಾತ್ರ. 

ಮತ್ತೆ,
ಒಡೆದ ಸ್ಮಾರಕ 
ನಾನು ಬಂಧಿ. 
ಮತ್ತೆ ಕಟ್ಟಿಕೊಳ್ಳಲು 
ನನಗೆ ನಾನೇ 
ನೇಮಿಸಿಕೊಂಡ ಸಿಬ್ಬಂದಿ. 


 

Saturday, July 29, 2017

ವಿದ್ಯುತ್ ತಂತಿ



ಎತ್ತರದ ಕಂಬಗಳಲ್ಲಿ
ಸದ್ದೇ ಮಾಡದೆ ಹರಿದಾಡಿ
ಅಲ್ಲಲ್ಲಿ, ಗಲ್ಲಿಗಳಲ್ಲಿ
ಕಾರ್ಖಾನೆಗಳಲ್ಲಿ
ಕೊಳೆಗೇರಿ ಬೀದಿಯ
ಗುಡಿಸಲುಗಳಲ್ಲಿ,
ಸಂಚಲನ ಮಾಡುವವೆ
ತಂತಿ ಕೊನೆಗೆ ಇಳಿಬಿಟ್ಟ
ದೀಪದೊಳಗೆ.

ಯಾರದೋ ವಿಶಾಲ ಚಾದರಗಳ
ಒಣಗಿಸಲು
ಹಗ್ಗ ಎಳೆದಂತೆ
ಕಂಬದಿಂದ ಕಂಬದ ಹೆಗಲಿಗೆ .
ಕಾಮಗಾರಿ  ಪ್ರಗತಿಯಲ್ಲಿದೆ
ಕತ್ತಲೆ ಓಡಿಸಲು .


ಪಾಳು  ಬಿದ್ದ ತಂತಿ ಮೇಲೆ
ಶಕ್ತಿ ಸಂಚಲನದ ಅಲೆ.
ಕಾಯೋ ಜನ ಗುಂಡಿ ಕೈಯಲ್ಲಿ ಹಿಡಿದು
ಹಳೇ ಬಲ್ಬು  ಉರಿವ ವೇಳೆಗೆ,
ಕಣ್ಣ ತುಂಬಾ ಒಮ್ಮೆ
ದೇವರ ಗುಡಿಯ
ಕೆಂಪಗಿನ ದೀಪ ನೋಡುವಾಸೆಗೆ.

ಗೋಡೆಗೆ ನೇತಾಡುವ ಲಾಂದ್ರ
ಅಪಶಕುನವೆಂಬಂತೆ
ಗಾಳಿಯಲಿ ತೂರಾಡಿತು
ಎಣ್ಣೆ  ಕುಡಿದ ಅಮಲಿಗೆ!.
ಮೂಲೆಯಲಿ ಕೂತ
ಅಜ್ಜಿಯ ಕೋಲು,
ಮತ್ತು ,ಜಪ್ಪಯ್ಯ ಎಂದರು
ಮೇಲೇಳದ ಕಾಲು
ಗಳ ನಡುವೆ
ನಿಸ್ತಂತು ವ್ಯವಹಾರ
ಎಂದೋ ಮುಗಿದ ಸಮಾಚಾರ.

ಕಣ್ಣ, ಬುರುಡೆ ದೀಪ  
ಆರೋ ಹೊತ್ತು
ಎದೆಯ ಬಾಗಿಲು ತೆರೆದು 
ಹಕ್ಕಿ ಹಾರಿತ್ತು.



ದುಡ್ಡು ತಿಂದ ಮಂತ್ರಿ
ಕುತಂತ್ರಿ.
ನಿಂತ ಕಾಮಗಾರಿ,
ಕತ್ತಲೊಳಗೆ ಕೊಳೆಗೇರಿ,
ಮೂಡದ ಸಂಚಲನ
ಅರ್ಥವಾಗದ ವ್ಯವಕಲನ.

ಗೋಡೆಬದಿಗೆ
ಜೋತುಬಿದ್ದ(ಸೋತು ಬಿದ್ದ),
ಹಳೇ ಸೀಮೆಎಣ್ಣೆ ದೀಪ
ಎಷ್ಟು  ಹೋರಾಡುದು
ಅದು ಪಾಪ.

ಜಡ, ಚೇತನ
ಮರಣ ,ಜನನ .

--------------------------------------------------------------ಸುಕೇಶ್








ಸಾಕ್ಷಾತ್ಕಾರ

ನವದ್ವಾರಗಳ ನಗರ
ತಲೆ ಗೋಪುರ 
ಕಂಡು ಕಾಣದೆ 
ಸುಮ್ಮನಿರುದೇ ಕಣ್ಣು 
ಕೇಳಿಯು ಕೇಳದಂತಿರಲು 
ಕಿವಿಗೆ ಭೋದಿಸಿ . 

ಎದೆ ಹೊಡೆವ ಘಂಟೆ,
ರಕ್ತದ ಚಲನೆ 
ಶುದ್ಧ,ಕಲ್ಮಶಗಳ ನಡುವೆ.  
ಒಂದೆಡೆ ನಿಲ್ಲದ ಕಾಲು 
ನಗರವನ್ನೇ ಎತ್ತಿ ಸಾಗಿದೆ 
ಅಲ್ಲಿಂದ ಇಲ್ಲಿಗೆ 
ಇಲ್ಲಿಂದ ಎಲ್ಲಿಗೆ? . 

ಮೌನಿಯಾಗದ ಬಾಯಿ 
ಬತ್ತದ ಕೊಳವೆ ಬಾವಿ,
ಮುಚ್ಚಿಕೊಂಡರೆ ನಗರವೇ 
ಖಾಲಿ,ಖಾಲಿ,ನೀರವ 
ಬಂಧಿ ಹಕ್ಕಿಯ ಗುಟುರಿಗೆ 
ನಗರದ ಮೂಲೆ, ಮೂಲೆ,
ಪ್ರತಿಧ್ವನಿಗಳ ಸ್ಥಾವರ. 


ಎಲ್ಲ ಕಡೆ ತೋರುವ ಮೂಗು,
ಎಲ್ಲ ಕಲಿವ ಹಂಬಲದ ಮಗು. 
ಗದರಿಸಿ,ಮಲಗಿಸಿ 
ಹೆಗಲಿಗೇರಿಸಿಕೊಂಡರೆ 
ಗಾಳಿ ಚೀಲ 
ನಾ ಹರಕಲು ಕುಚೇಲ. 

ನಗರ ನಿನ್ನದು 
ನನಗೆ ಒಂದಷ್ಟು  ದಿನದ ಗುತ್ತಿಗೆ 
ಮರೆತು,
ಸುಖಾಸುಮ್ಮನೆ ಮಲಗಿದ್ದೆ. 
ಎಬ್ಬಿಸು,ಉದ್ಧರಿಸು,
ಶುದ್ದೀಕರಿಸು,
ನಿನ್ನ  ಸಾಕ್ಷಾತ್ಕಾರದ ಭಕ್ತಿಗೆ,
ಮುಕ್ತಿಗೆ. 


--------------------------------------------------------------------------ಸುಕೇಶ್ 

Monday, June 19, 2017

"ಮಳೆ" ಒಂದು ನೆಪ

ನೀನು ನನ್ನ ಹಗಲುಗನಸು,
ಅದಕೆ ನನಗೆ ಇರುಳ ಮೇಲೆ ಮುನಿಸು
ಕ್ಷಮಿಸು, ಮತ್ತೆ
ಬೆಳಗಿಗೆ ಕಾಯುತ್ತೇನೆ
ತಾರೆಗಳ ಎಣಿಸುತ.

ಕುಂಟೆ ಬಿಲ್ಲೆಯ ಸದ್ದು
ಈಗಲೂ ಕೇಳುತ್ತದೆ
ನಿನ್ನ ನೆನೆಸಿಕೊಂಡು ಸುಮ್ಮನೆ
ಕುಳಿತರೆ,
ಕಲ್ಲು ಉಜ್ಜಿ , ಬೆರಳ ಜಜ್ಜಿಕೊಂಡು
ನೀ ಅತ್ತಾಗ, ನಾನು ಅಳುತಿದ್ದೆ
ಆ ಕಲ್ಲ ಮೇಲಿನ ಮುನಿಸು
ಇನ್ನೂ ಹೋಗಿಲ್ಲ,
ಗಲ್ಲ ಜಾರಿದ ಕಂಬನಿ
ಒರೆಸಿದ ಈ ಕೈ
ನಿನ್ನ ಮರೆತಿಲ್ಲ.

ಮೊದ ಮೊದಲ
ಸಣ್ಣ ಮಳೆಗೆ
ತೆರೆದ ಕಾಗದದ ದೋಣಿಯ
ಕಾರ್ಖಾನೆ .
ಹೆಸರ ಬರೆದು,
ಒಂದೊಮ್ಮೆ ಉಸಿರ ಎಳೆದು,
ಊದಿ ,ತೇಲಿಬಿಟ್ಟ
ಮೊದಲ ದೋಣಿ
ಈಗಲೂ ಸಾಗುತ್ತಿದೆ
ನೆನಪಿನಂತರಾಳದ ಸಾಗರದಲಿ.

ನೀ ಶಾಲೆಗ ನನಗಿಂತ  ಬೇಗ ಹೋದರೆ,
ಹೂದೆನೆಂದು ನನಗೆ ತಿಳಿಸಲು
ರಸ್ತೆಯಲ್ಲಿ ಹಾಕಿ ಹೋಗುತ್ತಿದ್ದ
ಒಂದು ಸೊಪ್ಪಿನ ಕಡ್ಡಿ,
ಅದು ಸಂದೇಶ ಮಾತ್ರವಲ್ಲ
ಮುಂದೆ ಆಗುವ
ನಿನ್ನ ಮುನಿಸಿನ, ಸಣ್ಣ ಜಗಳದ
ಸೂಚನೆ,
ನನ್ನ ಪೂರ್ತಿ ದಿನದ ಯಾತನೆ.

ತಪ್ಪು ನನ್ನದೇ
ಎಲ್ಲೋ ಮರೆತು ಬಿಟ್ಟ ಸ್ಲೆಟು, ಬಳಪ.
ಸಮಯಕ್ಕೆ ಸರಿಯಾಗಿ
ಕಾಲು ಮುರಿದುಕೊಂಡ ಚಪ್ಪಲಿ,
ಬಿಸಿ ಬುತ್ತಿಯಲ್ಲಿ  ಅಮ್ಮಮಾಡಿದ
ಕೋಳಿ ಸಾರು ನಿನಗೆಂದು ಎತ್ತಿಟ್ಟು,
ಅಕ್ಕ ನನಗೊಂದು ದೇವರ ಬೊಟ್ಟು ಇಟ್ಟು
ಕಳುಹಿಸಿ ಕೊಡುವಾಗ
ನನ್ನ ನೋಡಬೇಕಿತ್ತು ,
ನನಗೆ ನಿನ್ನ ನೋಡಬೇಕಿತ್ತು !!!

ದಾರಿ ತುಂಬಾ ನಾನು ಒಂಟಿ,
ಹಾಗೇ ನಡೆಯುತ್ತಿದೆ
ನಿನ್ನ ಪುಟ್ಟ ಹೆಜ್ಜೆಗುರುತುಗಳ
ಅನುಸರಿಸಿ.
ನಿನ್ನ ಕೋಪ
ವಾಲ್ಮೀಕಿಯ ಶಾಪ,
ಕೋಳಿ ಸಾರಿಗು ತಣಿಯಲೊಲ್ಲದು,
ಮಣಿಯಲೊಲ್ಲದು.
ಸಂಜೆ ಮತ್ತೆ ಜೊತೆಗೆ ನಡೆದರೂ
ತೆರೆಯದ ತುಟಿ, ಶಬ್ದಗಳ ಮುಷ್ಕರ,
ವಿಧಿಯಿಲ್ಲ ,ನಾನು ಕಾಯಬೇಕು ನಾಳೆ ನಿನ್ನ, 
ನಿನಗಿಂತ ಮುಂಚೆ ಬಂದು
ದಯವಿಟ್ಟು ಕ್ಷಮಿಸು ಎಂದು.

ನಿನ್ನಿಂದ ಎರವಲು ಪಡೆದ
ಕೈವಾರ  ಈಗಲೂ ಇದೆ.
ಕೆಲವೊಮ್ಮೆ ನೋಡುತ್ತೇನೆ,
ಅದರ ಮೊನೆ,
ನಿನ್ನ ನೆನಪಿನಷ್ಟೆ ಚೂಪು.
ತುಕ್ಕು ಹಿಡಿಯದಂತೆ
ನೆನಪ ಬಚ್ಚಿಟ್ಟಿದ್ದೇನೆ ಎದೆಯ
geometry boxನಲ್ಲಿ.

ಅಷ್ಟು ಬೇಗ
ದೊಡ್ಡವರಾದೆವು ಯಾಕೆ,
ಚಡ್ಡಿ ಬೆಳೆದು ಪ್ಯಾಂಟ್ ಆಯಿತು,
ನಿನ್ನ ಚಿಟ್ಟೆ ಚಿತ್ತಾರದ ಲಂಗ
ಬೆಳೆಯುದ ನಿಲ್ಲಿಸಿ
ಸಣ್ಣಗಾಯಿತು
ಸಂಪರ್ಕಕ್ಕೆ ಇದ್ದ ಹಳೆಯ ಫೋನ್
ತಂತಿ ಕಳೆದು ಕೊಂಡಿತು
ಎಡೆಯಕೊಂಡಿ,ಬದುಕ ಬಂಡಿ
ಯಾವುದೋ ತಿರುವುಗಳಲ್ಲಿ
ನುಣುಚಿಕೊಂಡಿತು,
ಕಳಚಿಕೊಂಡಿತು.

ಹೇ ಮೊನ್ನೆ ನೀನು ನಿನ್ನ ಮಗಳ ಜೊತೆ
ಫೇಸ್ಬುಕ್ ನಲ್ಲಿ
ಹಾಕಿದ ಫೋಟೋ ನೋಡಿದೆ
ಮುದ್ದಾಗಿದೆ,
ನೀ ಎಂದೋ ಹೇಳಿದ
ಒಂದು ಮಾತು ಮತ್ತೆ ಕಾಡಿದೆ
ಇರಲಿ ಬಿಡು
ಮೌನ ದಿನಪತ್ರಿಕೆಯಲ್ಲಿ
ಮತ್ತೆ ಬಿಸಿ ಬಿಸಿ ಸುದ್ದಿ
ಮುದ್ರಿಸಲಿ ಯಾಕೆ!!

ಮತ್ತೆ ಮಳೆ ಬರುವಹಾಗಿದೆ,
ಈ ಬಾರಿಯ ಮಳೆಯ ಸೀಸನ್
ನಿನಗೆಂದು ಮೀಸಲು,
ಮತ್ತೆ ಬರಿಗಾಲಲ್ಲಿ ನಡೆಯಬೇಕು
ಮಳೆಗೆ ನೆನೆಯುತ್ತಾ,
ಅಮ್ಮನ ಕೈಯಲ್ಲಿ ಕೋಳಿಸಾರು
ಮಾಡಿಸಬೇಕು
ಪಟ್ಟಿ ದೊಡ್ಡದಿದೆ. 

ಹ ಹೇಳಲು ಮರೆತೆ,
ನನ್ನ ಗೋಳು ಇದ್ದದ್ದೇ
ಮರೆತುಬಿಡು, 
ಅದು ನನಗೇ ಇರಲಿ,
ನೀನು, ನಿನ್ನ ಮಗಳಿಗೆ
ರೈನ್ ಕೋಟ್ ತೆಗಿಸಿ ಕೊಡು,
ಅದರಲ್ಲಿ ಚಿಟ್ಟೆ ಚಿತ್ತಾರವಿರಲಿ.

-----------------------------------------------------------------ಸುಕೇಶ್ 

Friday, June 16, 2017

ತಪ್ಪು

ಆಸೆ ನನಗೆ ತುಂಬಾ
ನಿನ್ನ ಕನಸುಗಳಲ್ಲಿ  ಜಾರಿಕೊಳ್ಳಲು
ಚಿತ್ತಾರಗಳ ನಡುವೆ ಸೇರಿಕೊಳ್ಳಲು

ಸುತ್ತಮುತ್ತ ಸಿಂಗಾರದ
ರಥದ ಬೀದಿ,
ಮನಸು ಮಾತ್ರ
ನೀ ನಡೆವ ತಿರುವುಗಳ
ಹಿಂಬಾಲಿಸುತ್ತದೆ

ಕಣಿವೆ ಹಾದಿಯಲ್ಲಿ
ದಾರಿ ತಪ್ಪುದು
ಜಾರಿ  ಬೀಳುದು ಸಹಜ
ಕಾರಣವೇನೇ ಇರಲಿ
ಕಾಣದೆ ನಿನ್ನ ಕೈ
ಹಿಡಿದುಕೊಳ್ಳುತ್ತೇನೆ
ತಪ್ಪು ನನ್ನದೇ !!!.

ತಪ್ಪು ನನ್ನದೇ ,
ದೇವರ  ಪ್ರತಿಮೆ ಮುಂದೆಯೂ
ಕಣ್ಣುಮುಚ್ಚಿ
ನಿನ್ನ ನೆನಪಿಸಿಕೊಂಡದ್ದು
ನನ್ನ ತಪ್ಪು,
ಬೀಳೋ ಮಳೆಗೆ
ಅಂಗೈ ಒಡ್ಡಿ
ಮೈಮರೆತಿದ್ದು
ಬಹುಶ ನನ್ನ ತಪ್ಪು.

ಸುತ್ತಮುತ್ತ ಜನ ಏನೇ ಅನ್ನಲಿ
ನನ್ನ ನಾನೇ ಮಾರಿಕೊಂಡು
ನಿನಗೆ ಬೆಲೆ ಕೊಟ್ಟದ್ದು,
ನನ್ನದಲ್ಲದ ತಪ್ಪಿಗೆ,
ಒಂದಿಷ್ಟು ಸಣ್ಣ  ಮುನಿಸಿಗೆ,ಮೌನಕ್ಕೆ
ಕ್ಷಮಿಸು ಅಂದದ್ದು
ನನ್ನ ತಪ್ಪು .

ಆಸೆ ನನಗೆ ತುಂಬಾ
ಎಲ್ಲ ಸುಳ್ಳುಗಳ ನಂಬಿಕೊಳ್ಳಲು
ನಿನ್ನ ಕನಸುಗಳಿಂದ ಜಾರಿಕೊಳ್ಳಲು.

ಸುತ್ತಮುತ್ತ
ಸಿಂಗಾರದ ರಥಬೀದಿ
ಮನಸೇ ಕ್ಷಮಿಸು ನಡೆದದ್ದು
ನನ್ನದಲ್ಲದ ಹಾದಿ!!!


-----------------------------------------------------------------------------------ಸುಕೇಶ್ 

Saturday, February 18, 2017

ಊರ ಜಾತ್ರೆಯಲ್ಲಿ ಬೊಂಬೆಯೊಂದು ಇಷ್ಟವಾಯಿತೇಕೆ -೨

ಬೊಂಬೆ ಕಂಗಳಲ್ಲಿ ಕಳೆದು ಹೋದ ಆ ಘಳಿಗೆ , ಅಮೃತ ಘಳಿಗೆ  . . . . . . . . . . . . . !!!!.

ಜಾತ್ರೆ ತೇರು ಮುಂದುವರಿಯುತ್ತಿತ್ತು, ನಾನಿನ್ನೂ ಬೊಂಬೆ ಅಂಗಡಿ ಮುಂದೇನೇ ಇದ್ದೆ, ಅದೇ ಬೇಕು ಎನ್ನುವ ಹಂಬಲ, ಒಂದಷ್ಟು ಗೊಂದಲದ ಜೊತೆ,

ಚಿಕ್ಕವನಿದ್ದಾಗ, ಅಪ್ಪನ ಜೊತೆ ಜಾತ್ರೆಗೆ ಹೋದಾಗಲೆಲ್ಲ  ಯಾವುದೊ ಬೊಂಬೆಗೆ ಹಟ ಹಿಡಿದದ್ದು, ಜಾತ್ರೆಗೆಂದು ತಂದಿದ್ದ ಹೊಸಬಟ್ಟೆಯಲ್ಲೇ ನೆಲದ ಮೇಲೆ ಉರುಳಾಡಿ ,ಅತ್ತು ರಂಪ ಮಾಡಿದ್ದು , ಸುಮ್ಮನಿರದ ನನ್ನ , ಅಪ್ಪ ಗದರಿಸಿ, ಹೆದರಿಸಿ ಸುಮ್ಮನಾಗಿಸಿದ್ದು, ಎಲ್ಲರ ಮೇಲಿನ ಸಿಟ್ಟಿಗೆ ಊಟ ಬಿಟ್ಟು ಉಪವಾಸ ಮಾಡಿದ್ದು, ಕಣ್ಣ ಮುಂದೆ ಊರ ಜಾತ್ರೆಯ ಬೀದಿ ಹಾಗೆ ತೇಲಿ ಹೊಯ್ತು.

ಯಾರದೋ ಕೈಯಲ್ಲಿ ಪುಟ್ಟ ಬೊಂಬೆ ಕಂಡಾಗಲೆಲ್ಲ ಎದೆ ಮೆಲ್ಲ ನಲುಗುತಿತ್ತು . . . . . .

ಈಗ ಹಾಗೆ ಮತ್ತೆ ಅತ್ತು ರಂಪ ಮಾಡಿದರೆ ???.

ಸುಮ್ಮನಿದ್ದ ನಾನು , ಏನೋ ಕಂಡು ತಡಬಡಿಸಿ ಎದ್ದು , ಕಣ್ಣುಜ್ಜಿ ನಿನ್ನ ಕಂಡಾಗ , ಕಣ್ಣ ರೆಪ್ಪೆಗಳು ಮುಚ್ಚದೇ ಹಾಗೇ ನೋಡುತಿದ್ದವು. ಇಷ್ಟು ದಿವಸ ಎದೆಯ ಸೂತ್ರ ಹಿಡಿದು ಕಾದದ್ದು ಬಹುಶ ನಿನಗೇ ಇರಬೇಕು ಅನ್ನಿಸುತಿತ್ತು .

ಊರ ಬೀದಿಯಲ್ಲೇ
ದಾರಿ ತಪ್ಪಿದ ಹಾಗೆ,
ಮನಸು ದಿಕ್ಕು ಕೆಟ್ಟು ಕಂಗಾಲು,
ಸೂತ್ರವಿರದೆ ಹಾರಿತೆಲ್ಲೋ
ಹೃದಯ ಯಾಕೋ
ಸಣ್ಣ ದಿಗಿಲು .


ಒಂದೆರಡು ದಿನದ ಹಿಂದೆ ಚಂದಿರ ಮೈ ತುಂಬಿ ಹೊಳೆಯುತ್ತಿದ್ದ , ಬಾನ ತುಂಬಾ ಹುಣ್ಣಿಮೆಯ ಕಳೆ, ಭೂಮಿ ಉಸಿರ ಬಿಗಿ ಹಿಡಿದು ಆ ಘಳಿಗೆಗೆ ಕಾಯುತಿತ್ತು.

ನೀ ನನಗಿಷ್ಟವಾದ ಬಟ್ಟೆ ಉಟ್ಟು ಬಂದ ದಿನ ನಾ ನಿನಗೆ  ಕಾದಂತೆ . . . . . . . !!.

ಈ ಸಂಜೆ ಯಾಕೋ ತುಂಬಾ ಮೆಲ್ಲನೆ ಜಾರುತ್ತಿತ್ತು, ಬಾನ ತುಂಬಾ ಹಾರೋ ಹಕ್ಕಿ, ಮರಳಿ ಗೂಡು ಸೇರೋ ಬಯಕೆ,ಪುಟ್ಟ ಗೂಡಲ್ಲಿ ಕಾವೇರುವ ಮೊಟ್ಟೆ.
ಪಡುವಣ ಕಡಲಿನಲ್ಲಿ ಸೂರ್ಯ ಕಾಲು ತೊಳೆಯುತಿದ್ದ ಹಗಲಿಡೀ ಗಾರೆ ಕೆಲಸ ಮಾಡಿ ಸೋತು, ನೀರಿನ ತುಂಬಾ ಮಣ್ಣಿನ ಬಣ್ಣ.

ಒಂದು ಪೇಲವ ಮೌನ, ಮಾತಿನ ಕೊರತೆ, ಕಟ್ಟಿಟ್ಟ ಶಬ್ದಗಳ ಒರತೆ, ಹೇಳಬೇಕು ಎಂದು ಅಂದು ಕೊಂಡದ್ದನ್ನು ಹೇಳಿದ್ದರೆ ಇಷ್ಟೆಲ್ಲ ಬರೆಯ ಬೇಕು ಅನ್ನಿಸುತ್ತಿರಲಿಲ್ಲವೇನೋ. ಕರಗುವ ಸಮಯದ ಜೊತೆ ಕೊರಗುವ ನೆನಪು, ನೀ ನೆಪ .. .. . . .. . . .!!!!.

ಮಾತ ನಡುವಿನ
ಪುಟ್ಟ ಮೌನ,
ಬಿಡುವೆ ಇರದ
ಧ್ಯಾನ,
ಕ್ಷಣಿಕಕಾದರು
ಸೋಲಲೊಲ್ಲದೆ
ನನಗೆ ನಿನ್ನ ಮನ.


ಇರುಳ ಚಾದರ ಭೂಮಿ ತುಂಬಾ ಯಾರೋ ಎಳೆಯುತ್ತಿದ್ದರು ಅವಸರ ಅವಸರವಾಗಿ. ಪುಟ್ಟ ಗುಬ್ಬಿ ಹಕ್ಕಿ ಆಗಲೇ ನಿದ್ದೆಗೆ ಜಾರಿತ್ತು ,ಕಣ್ಣ ತುಂಬಾ ಕನಸು, ಒಣಗಿದ ಕಣಗಿಲೆಯಲ್ಲೊ ಮಧು ಮಕರಂದ ಸಿಕ್ಕಿದಂತೆ,

ಕನಸೇ ಮುಂಜಾನೆಗೆ ಭರವಸೆ. ಹಕ್ಕಿ ಬೆಳಗೆದ್ದು ಕಣಗಿಲೆ ಮರ ಹುಡುಕಬಹುದೇನೋ ... . . . .!!!

ಬಿದ್ದ ಕನಸುಗಳ
ಸಾಲು ಸಾಲು,
ಅವುಗಳಲ್ಲಿ ಹೆಚ್ಚಿನವು
ನಿನ್ನದೇ ಸಿಂಹಪಾಲು.
ಎದ್ದ ಕೂಡಲೇ ಕಣ್ಣುಜ್ಜಿ ಕೊಂಡರೆ,
ಕಣ್ಣ ಪರದೆ ತುಂಬಾ ಬಣ್ಣ
ಯಾರೋ ಚೆಲ್ಲಿ,ಸ್ವಲ್ಪ ಒರೆಸಿ ಹೋದಂತೆ,
ಗೋಜಲು, ಗೋಜಲು
ಇದು ಪ್ರತಿ ದಿನದ ಮಾಮೂಲು.


ಸುಮ್ಮನೆ ಹಾಗೆ ಒಂದಷ್ಟು ಹೊತ್ತು ಕಣ್ಣು ಮುಚ್ಚಿಕೊಂಡೆ, ಬೊಂಬೆ  ಬಿಂಬ ತೇಲಿ ಬಂತು, ಎಂದಿನಂತೆ. . ... . . . . .. !!. ಜಾಸ್ತಿ ನೋಡುವ ಆಸೆ , ಕಣ್ಣು ತೆರೆಯಬೇಕು ಅನ್ನಿಸಲಿಲ್ಲ,ಮನಸು ನಿನ್ನ ಸುತ್ತಲೇ ಸಮಾಧಿಯಾಗಿತ್ತು, ಕಾರಣಗಳಿಗೆ ಶಬ್ಧ, ವ್ಯಾಕರಣಗಳ ಸೇರಿಸಿ, ಹೇಳಿಬಿಟ್ಟರೆ , ಬರೆದರೆ, ಮತ್ತೆ ಎಲ್ಲ  ಖಾಲಿ ಖಾಲಿ. ಎದೆಯ ಕರ್ಟನ್ ತೆಗೆದು ಬಿಟ್ಟಂತೆ.!!

ಕಣ್ಣ ಮುಚ್ಚಿದರೆ
ಕಣ್ಣ ಪರದೆ  ಮೇಲೆ
ನೀನೇ ರಂಗನಾಯಕಿ.
ಕಣ್ಣ ತೆರೆಯಬೇಕು
ಅನ್ನಿಸುತ್ತಿಲ್ಲ
ನಾ ಕನಸಿನಲೇ ಪರಮ ಸುಖಿ.


bottom ಲೈನ್ ,

ಜಾತ್ರೆ ತುಂಬಾ ತಿರುಗಿ ಮತ್ತೆ ಅಲ್ಲಿಗೇ ಬಂದೆ. ಅದೇ ಅಂಗಡಿಗೆ, ಬೊಂಬೆ ಅಲ್ಲೇ ಇತ್ತು. ಖಾಲಿ ಜೇಬಿನೊಳಗೆ ಖಾಲಿ ಕೈ, ನಿಂತು ಹಾಗೇ ನೋಡುತಿದ್ದೆ, ಬೊಂಬೆಯ ಕಡೆಯದೊಂದು ಚಿತ್ರ ಎದೆಯೊಳಗೆ ಅಚ್ಚು ಒತ್ತುವ ತವಕದೊಂದಿಗೆ. ಅಂಗಡಿಯ ಮಾಲೀಕ ಎಲ್ಲ ಮುಚ್ಚಿಟ್ಟು, ಜಾತ್ರೆ ಮುಗಿಸಿ ಜಾಗ ಖಾಲಿ ಮಾಡುವ ಅವಸರದಲ್ಲಿದ್ದ,

ಬೊಂಬೆ ಮತ್ತೆ ಅಂಗಡಿಯವನ ಚೀಲ ಸೇರಿತ್ತು. ನಾ ಜಾರೊ ಕಂಬನಿ ಒರೆಸಿಕೊಳ್ಳಲು , ಖಾಲಿ ಜೇಬಿನಿಂದ ಕೈ ಎಳೆದು ಕೊಂಡೆ.

ಎದೆಯ ಕೊಳದಲಿ
ಬಗ್ಗಿ ನೋಡಿದರೆ
ಕಣ್ಣಿಂದ ಜಾರಿ ಬಿದ್ದ
ಕಂಬನಿಗೆ ,
ನಿನ್ನ ಪ್ರತಿಬಿಂಬ ಮೆಲ್ಲ
ಚದುರುತಿತ್ತು.

ಜಾತ್ರೆ ಮುಗಿದಿತ್ತು, ನಾ ಮುಂದಿನ ವರುಷ ಬೊಂಬೆ ಕೊಳ್ಳಲು ದಿನ ಎದುರು ನೋಡುತಿದ್ದೆ. ಖಾಲಿ ಜೇಬಿನ ತುಂಬಾ ಒಂದಷ್ಟು ಹಣ ತುಂಬಿಸಿಕೊಳ್ಳುತ್ತ.

ಜಾತ್ರೆ ಮತ್ತೆ ಬರುವುದು . . . . . . . . . . . . . . .  . .  .!!!!!!





.....................................................................................................................ಸುಕೇಶ್


Monday, February 6, 2017

ಅಂತರಾತ್ಮ

ಬೀಳೋ ಮುಂಚೆ
ಹೇಳೋ ಕೋಲು
ತಿಳಿದೋ
ತಿಳಿಯದೆಯೋ
ಮತ್ತೆ ಹಿಂಬಾಲಿಸುತೇನೆ
ಸರಿಯಾಗಿ ದಾರಿ ಹೇಳು.

ಸಣ್ಣ ಸದ್ದು
ನನಗಷ್ಟೇ ಕೇಳುತ್ತದೆ
ಎದೆಯ ಬಡಿತಕ್ಕಿಂತಲು
ಮೆಲ್ಲಗೆ.
ಕ್ಷೀಣ ಕಿವಿ,
ಸುತ್ತಮುತ್ತಲ
ಗೌಜು ಗದ್ದಲದ ನಡುವೆ
ತಡವರಿಸಿ, ಎದ್ದು ಬಿದ್ದು
ನಡೆಯುದು ಎಲ್ಲಿಗೆ.

ಬೆಳಕ ಕಿಡಿ ಕಣ್ಣ ಮುಚ್ಚಿದರು
ಕಾಣುತ್ತದೆ.
ಪುಟ್ಟ ಪುಟ್ಟ ಹೆಜ್ಜೆ
ಬಹು ದೂರ ಪಯಣ
ವಿರಮಿಸೋಣವೆಂದರೆ
ಕಿಡಿ ಆರಿ ಹೋಗುವ ಭಯ.

ಕಿರಿದು ದಾರಿ
ಎಲ್ಲ ಮುಗಿದು
ಕೊನೆಗೆ  ನಿಂತರೆ,
ಸರಿದ ದಾರಿಯ ತುಂಬಾ
ಅಲ್ಲಲ್ಲಿ ಬರೆದ ಅಸ್ಪಷ್ಟ ಮೈಲು ಕಂಬ.
ಹಾರೋ ಹಕ್ಕಿ, ಖಾಲಿ ಗೂಡು,
ಬದುಕು ಕೊನೆಯಿಂದ
ಮತ್ತೆ ಪ್ರಾರಂಭ.

ಎಲ್ಲ ಎಲ್ಲೆಯ ಮೀರಿ
ಬರದ  ನಾಳೆಯ,
ಇರದ ನಿನ್ನೆಯ ,
ಮರೆತ ಇಂದಿನ
ತುಂಬಾ ನನಗಾಗಿ ಬದುಕಿದ್ದು
ಒಂದಷ್ಟು ಹೊತ್ತು,
ಅದೆಷ್ಟೆನ್ನುದು ನನಗಷ್ಟೇ ಗೊತ್ತು.


ದಾರಿ ಹೇಳೋ ಕೋಲು,
ಎದೆಯೊಳಗಿನ ಸಣ್ಣ ಸದ್ದು
ಕಣ್ಣ ಕಿಡಿ,
ಬಿಡದೆ ಹಿಂಬಾಲಿಸಬೇಕು
ದಯವಿಟ್ಟು ದಾರಿ ಬಿಡಿ .

Monday, January 30, 2017

ಜಾತಿ

ನಾ ಹುಟ್ಟುವಾಗಲೇ
ಹುಟ್ಟಿಕೊಂಡಿತು,
ನನ್ನ ಸುತ್ತಲೇ
ಸುತ್ತಿಕೊಂಡಿತು.
ಪರದೆ ಮೇಲೆ ಯಾರೋ
ಸಣ್ಣಗೆ ಎಳೆದ ಗೆರೆ
ಅಳಿಸದೆ ಪರಿಧಿಯಾಯಿತು .

ಸುತ್ತಣ ಗೋಡೆ,
ಕೆಡವಿದಷ್ಟು ಕಟ್ಟೋ ಮಂದಿ,
ಹಾರೆ ಗುದ್ದಲಿಗಳ ಮೇಲೆ
ಹಾರೋ  ವಿಭಜನೆಯ ಪತಾಕೆ.
ಹಾಹಕಾರಗಳ ನಡುವೆ,
ಆಹಾರ ಬೇಯಿಸಿಕೊಂಡದ್ದು
ಅವರವರು, ಅವರವರ ಮತಕ್ಕೆ .

ಕಾಣದ ದೇವರುಗಳಿಗೆ
ಕೈ, ಕಾಲು, ಕಣ್ಣು ಕೊಟ್ಟು
ಅಲ್ಲಲ್ಲಿ ನಿಲ್ಲಿಸಿ ಆಯಿತು.
ಅವ ಏನು ಮಾಡಿಯಾನು
ಪೂಜಿಸಲೊಂದು ಜಾತಿ,
ಬೇಡಲೊಂದು .
ಎಂದೂ ಮುಗಿಯದ ಇಷ್ಟಾರ್ಥ!!.

ಅಂದು ಗುರು ಹೇಳಿದ್ದ
ಒಂದೇ ಜಾತಿ,ಮತ,ಕುಲ.
ನಾವು ಕೇಳಲಿಲ್ಲವಲ್ಲ,
ಗುರುವಿನ
ಗುಲಾಮನಾಗಲಿಲ್ಲ.
ಒಬ್ಬೊಬ್ಬರಿಗೆ ಒಂದೊಂದು
ಮೀಸಲಾತಿ,
ಹೀಗೇ ಆದರೆ ಮುಂದೊಂದು ದಿನ
ಪೂರ್ತಿ ಅವನತಿ.!!!

--------------------------------------------------------ಸುಕೇಶ್ 


Sunday, January 22, 2017

ಊರ ಜಾತ್ರೆಯಲ್ಲಿ ಬೊಂಬೆಯೊಂದು ಇಷ್ಟವಾಯಿತೇಕೆ.......


ಸಣ್ಣ ಟೇಬಲ್ ನ ಎದುರು ಕೂತು ನಿನ್ನ ಕಣ್ಣುಗಳನ್ನೇ ನೋಡುತಿದ್ದೆ , ಕಣ್ಣ ಬಿಂಬದಲ್ಲಿ ನನ್ನ ನೋಡುವ ಆಸೆಯಿಂದ. ಆ ನಿನ್ನ ಪುಟ್ಟ ಕಣ್ಣುಗಳು ರಾತ್ರಿ ಕಣ್ಣು ಮುಚ್ಚಿಕೊಂಡಾಗ ನನ್ನದು ಒಂದು ಕನಸು ಬಂದಿದ್ದರೆ !!,ಆ ಕನಸಿಗೆ ನೀನು ನಿನಗೂ ತಿಳಿಯದಂತೆ ಮುಗುಳ್ನಗಿದ್ದರೆ!!. ಯಾಕೋ ಎದೆ ಸಣ್ಣಗೆ ಕಂಪಿಸುತ್ತಿತ್ತು ನನ್ನದಲ್ಲದ ಕಲ್ಪನೆಗೆ.

ಹೌದು ಹಿಂದೆ ಎಂದೋ ನಿನಗೆಂದು ಬರೆದ ಕವಿತೆ ಯಾಕೋ ಆಪ್ತವಾಯಿತು ,

ಮೊನ್ನೆ ಮೊನ್ನೆ
ಚಂದಿರ ಸಿಂಗರಿಸಿಕೊಂಡಿದ್ದ
ನಿನ್ನನೇ ಅನುಕರಿಸಿ,
ಕೆನ್ನೆ ಕೆಂಪು, ಕಣ್ಣ ಹೊಳಪು
ಜೋಪಾನ , ಕದ್ದು ಬಿಟ್ಟಾನು
ನಿನ್ನ ಯಾಮಾರಿಸಿ.

ಎಲ್ಲ ಕಡೆ ನಿನ್ನನೇ ಹುಡುಕುದು, ನಿನ್ನೊಂದಿಗಿರಲು ಹಾತೊರೆಯುದು ಯಾಕೋ ಅಭ್ಯಾಸವಾಗಿದೆ. ಸಣ್ಣದಾಗಿ ಶುರುವಾದ ಮಾತು, ಪರಿಚಯದ ಮುಗುಳ್ನಗು ,  ನನ್ನ ಒಂಚೂರು ಬಿಡದೆ ಕಾಡಿದ್ದೇಕೆ? ಸುತ್ತ ನಿಯಮಗಳ ಬಲೆ ಹೆಣೆದು ಅದರೊಳಗೇ ಬದುಕುತಿದ್ದ ನಾನು ಎಲ್ಲ ನಿಯಮಗಳ ಗಾಳಿಗೆ ತೋರಿ ನಿನ್ನ ಬಯಸಿದ್ದೇಕೆ? . ಪ್ರತೀ ಸಲ ಸೋಲುತ್ತೇನೆ ನಿನ್ನ ಎದುರು, ಪ್ರತೀ ಮೌನಕ್ಕೋ ಉತ್ತರ ಹುಡುಕುತ್ತೇನೆ ............

ಕೆಲವೊಮ್ಮೆ ಮಾತಿಗಿಂತ ಮೌನವೇ ಹಿತವೆನಿಸುತ್ತದೆ, ನನಗೆ ನೀ ಹೇಳದ ಮಾತುಗಳ ಕಲ್ಪಿಸಿಕೊಂಡು. ನಿನ್ನ ಪ್ರತೀ ಮಾತಿಗೂ, ಮೌನಕ್ಕೋ ಕವಿತೆ ಬರೆಯಬಲ್ಲೆ, ನೀ ಒಲ್ಲೆ ಅನ್ನದಿದ್ದರೆ !!!.

ಮೌನ
ಕಣಿವೆ
ಮಾತು
ಪ್ರತಿಧ್ವನಿ.

ದೊಡ್ಡದಾಗಿ possessiveness ಕಾಡುತ್ತದೆ, ನೀನೇ ಬೇಕು ಎಂಬ ಹಂಬಲದ ಜೊತೆ. ನಿನ್ನೊಂದಿಗೆ ನಾನೇ ಇರಬೇಕು,ನಿನ್ನ ಪ್ರತಿಯೊಂದು ಮಾತು,ಯೋಚನೆಗಳಲ್ಲಿ ನನಗೂ ಪಾಲಿರಬೇಕು ,ಗೊತ್ತು ಆಸೆ ಚಿಕ್ಕದಲ್ಲ, ಆದರೊ ನನ್ನ ಜೊತೆ ನಾನೇ ಯುದ್ಧಕ್ಕೆ ನಿಲ್ಲುತ್ತೇನೆ ನಿನ್ನ ಗೆಲ್ಲುವ ನೆಪಕ್ಕೆ.ಮತ್ತೆ ಸೋಲುತ್ತೇನೆ,ನಗುತ್ತೇನೆ,ಅಳುತ್ತೇನೆ . ಭ್ರಮೆಗಳಿಗೆ ಕ್ಷಮೆಯೆಲ್ಲಿ ???!!.

ಒಂದು ಸುಳ್ಳು ಹೇಳಿಬಿಡು ,ನಿನಗೆ ನೀನೆ. ಹೀಗೇ ನನ್ನ ಹಾಗೆ ನಿನಗೂ ಆಗಿದೆ ಎಂದು . ಹಿತವೆನಿಸಬಹುದು ನಿನಗೂ, ನನಗು.


ಎಲ್ಲ ಪ್ರಶ್ನೆಗೆ ಉತ್ತರ ಹುಡುಕ ಹೊರಟರೆ, ನನ್ನ ನಾ ಕಳೆದು ಕೊಂಡೇನು. ಅದಕ್ಕೆ ಇರಬೇಕು ನಾ ನನ್ನೊಳಗೆ ಗುದ್ದಾಡುದು, ಒಂದು insecure feeling ಗೆ. ಎಲ್ಲ ನಿಯಮಗಳು ನಿನ್ನೆದುರು ಸದ್ದಿಲ್ಲದೆ ಜಾರಿಕೊಳ್ಳುತ್ತವೆ , ಯಾರನ್ನೂ , ಯಾವುದಕ್ಕೂ ಮತ್ತೆ ಮತ್ತೆ ಕೇಳದ ನಾನು , ನಿನ್ನಲ್ಲಿ ಎಷ್ಟು ಸಲ ಬೇಕಾದರೂ ಕೇಳಿಯೇನೂ . ತಿರಸ್ಕಾರ, ನಾಚಿಕೆ , ಅವಮಾನಗಳಿಗೆ ಅಭ್ಯಾಸವಾಗಿದೆ.


ತುಂಬಾ ಸಲ ಅಂದುಕೊಳ್ಳುತ್ತೇನೆ, ನಿನ್ನ ಬಗ್ಗೆ ಯೋಚಿಸಲೇ ಬಾರದೆಂದು, ಆದರೊ ಮತ್ತೆ ನನ್ನ ಸಮಯಗಳ ನಿನಗೆಂದು ಮಾರಿಕೊಳ್ಳುತ್ತೇನೆ. ಖಾಲಿಯಾದ ಸಮಯದ ಜೋಳಿಗೆಗೆ ಮತ್ತೊಂದಷ್ಟು ನೆನಪ ತುಂಬಿಕೊಳ್ಳುತ್ತೇನೆ, ಮುಂದೊಂದು ದಿನ , ನೀನೇ ಇರದ ಕ್ಷಣಕ್ಕೆ ಮೆಲುಕು ಹಾಕಲು.

ಖಾಲಿ ಜೋಳಿಗೆ ತುಂಬಾ
ನಿನ್ನ ನೆನಪು.
ಕೆಲವು ಕಪ್ಪು,
ಹಲವು ಬಿಳುಪು.

ನೀನು ಬಣ್ಣಗಳ ಕುಂಚ ಕೊಟ್ಟು ನೋಡು, ನಾ ಬದುಕ ಚಿತ್ರಗಾರ, ಪ್ರತೀ ಸಲ ಸೋಲುವವಗೆ ಬದುಕ ಗೆಲ್ಲುದು ಗೊತ್ತು. ನಮ್ಮದೆನ್ನುವವ ಪುಟ್ಟ ಪ್ರಪಂಚಕ್ಕೆ ನಾನೇ ಕಾವಲುಗಾರ, ದಂಡನಾಯಕ. ನಿನ್ನ ಕಾಯುದು, ಕನಸ ಆಯುದು ನನ್ನ ನಿತ್ಯ ಕಾಯಕ!!!!!.

ಕೊನೆಯದಾಗಿ,

ಊರ ಜಾತ್ರೆಯಲ್ಲಿ ಬೊಂಬೆಯೊಂದು ಇಷ್ಟವಾಯಿತು,ಇಷ್ಟವಾದದ್ದು ಅದರ ಅಂದ ಚಂದಕ್ಕಲ್ಲ, ಬೊಂಬೆ ಮಾರುವವ "ಸಾರ್ ಇದು ತಗೊಳ್ಳಿ ಚಂದವಿದೆ " ಎಂದು ಹೇಳಿದನೆಂದು ಅಲ್ಲ. ಕಾರಣವೇನೇ ಇರಲಿ ,ಬೊಂಬೆಯನೇ ನೋಡಿದೆ, ಕಣ್ಣ ಬಿಂಬದಲ್ಲಿ ನನ್ನ ನೋಡುವ ಆಸೆಯಿಂದ. ತೇಲೋ ಪುಟ್ಟ ಕಂಗಳಲಿ ದಿನಾ ಹುಡುಕುತ್ತೇನೆ ಕಳೆದುಕೊಂಡ ನನ್ನನ್ನು. ಜಾತ್ರೆ ಮುಗಿವ ಮೊದಲು ಹುಡುಕೋಣವೆ ಜೊತೆಗಿನ್ನು . . . . . . . .. . . . !!!!

ಬೋಂಬೆ ಕಂಗಳಲ್ಲಿ ಕಳೆದು ಹೋದ ಆ ಘಳಿಗೆ , ಅಮೃತ ಘಳಿಗೆ  ...............!!!

ಜಾತ್ರೆ ತೇರು ಮುಂದುವರಿಯುದು ...................................





Yours

Sush
















Saturday, January 14, 2017

ಚಿತ್ರ ಬರಹ -೩


ಈ ಲೇಖನ ಬರೆಯೋಕೆ ಯಾಕೋ ಸ್ವಲ್ಪ ನಾಚಿಕೆ ಆಗುತ್ತದೆ,ಸಣ್ಣದಾಗಿ guilt ಕಾಡುತ್ತದೆ ಎಲ್ಲೋ ಯಾರದೋ ಹಸಿವಿನ ಕೂಗು, ಪುಟ್ಟ ಹೊಟ್ಟೆಯ ಚೀರಾಟ ಕೇಳಿದಂತೆ,ಕೊನೆಯ ಉಸಿರು ಎಳೆಯಲು ಶಕ್ತಿ ಇಲ್ಲದೆ, ಯಾರೋ ಮತ್ತೆ ತೆರೆಯದೆ ಕಣ್ಣು ಮುಚ್ಚಿದಂತೆ ಅನಿಸುತ್ತದೆ.

ನಾನು ದುಡಿದದ್ದು, ಎಷ್ಟು ಬೇಕಾದರೂ ತಿನ್ನುತ್ತೇನೆ,ಎಷ್ಟು ಬೇಕಾದರೂ ವೇಸ್ಟ್ ಮಾಡುತ್ತೇನೆ. ಏನಿವಾಗ ?? ಎಷ್ಟೋ ಜನ ಹೀಗೇ ಅಂದುಕೊಂಡು ಹೋಟೆಲ್,ಮನೆಗಳಲ್ಲಿ ಬಿಸಾಡಿದೆಷ್ಟು?. ಒಮ್ಮೆ ಯೋಚಿಸಿ ಪಕ್ಕದ ಬೀದಿಯಲ್ಲೇ ಯಾರೋ ದಿನ ಪೂರ್ತಿ ಸರಿಯಾಗಿ ಊಟಮಾಡದೆ,ಬೇಡಿದವರ ಕೈಯಲ್ಲಿ ಬೈಸಿಕೊಂಡು , ನಿತ್ರಾಣದಿಂದ ನಿದ್ದೆ ಹೋಗಿರಬಹುದು.

ಯಾರು ಹೊಣೆ? ನಾವೇ, ಇನ್ನಾರು?? ದೇಶ ಸ್ವತಂತ್ರಗೊಂಡು ಇಷ್ಟೊಂದು ವರ್ಷವಾದರೂ ನಮಗೆ, ದಾರಿದ್ರ್ಯ,ಹಸಿವು,ಪೌಷ್ಟಿಕ ಆಹಾರದ ಕೊರತೆಗಳನ್ನು ದೂರ ಮಾಡಲಾಗಲಿಲ್ಲ. ಅಂಥವರು ನಾವು smart city , cashless ವ್ಯವಹಾರಗಳ ಬಗ್ಗೆ ಮಾತಾಡುತ್ತೇವೆ . ರಾಜಕೀಯ, ಸಿನೆಮಾ, ಕ್ರಿಕೆಟ್, ಹಾಳು ಮೂಳು ಸುದ್ದಿಗಳ  ಸದ್ದಿನ ಜೊತೆ ಯಾರದೋ ಹಸಿವಿನ ಚೀರಾಟ ನಮಗೆ ಕೇಳುದೇ ಇಲ್ಲ.

ನಿಮಗೊಂದು ಆತಂಕ ಪಡಬೇಕಾದಂಥ ವಿಷಯ ಗೊತ್ತೇ, ನಮ್ಮ ದೇಶ ಪ್ರಪಂಚದಲ್ಲೇ ಅತೀ ಹೆಚ್ಚು ಹಸಿವಿನಿಂದ ಮತ್ತು ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುತ್ತಿರುವವರ ಹೊಂದಿರುವ ದೇಶ ,ಒಟ್ಟು ೧೯೪ ಮಿಲಿಯನ್ ಗೂ ಜಾಸ್ತಿ ಜನ ತುತ್ತು ಅನ್ನಕ್ಕೂ ಗತಿಯಿಲ್ಲದೆ (ಸಾಯುತ್ತಿದ್ದಾರೆ) ಬದುಕುತ್ತಿದ್ದಾರೆ. ಇಡೀ ಪ್ರಪಂಚದಲ್ಲಿ ಒಟ್ಟು ೭೯೫ ಮಿಲಿಯನ್ ಜನ ಒಂದು ಹೊತ್ತಿನ ಅನ್ನಕ್ಕಾಗಿ ಕಾಯುತ್ತಾ ಬದುಕುತ್ತಾರೆ. ನಾಳೆ ಮತ್ತೆ ನಿಮ್ಮ ತಟ್ಟೆಯಲ್ಲಿ ತಿನ್ನದೇ ಉಳಿದ ಆಹಾರ ಬಿಸಾಡುವಾಗ ಈ ಅಂಕಿಅಂಶವನ್ನು ಜ್ಞಾಪಿಸಿಕೊಳ್ಳಿ.

ಇಸ್ಟೇ ಅಲ್ಲ ಈ ಕೆಳಗಿನ ಅಂಕಿಅಂಶಗಳ ನೋಡಿದರೆ ನೀವು ಬೆಚ್ಚಿ ಬೀಳುತ್ತೀರಿ.

ದೇಶದ ಒಟ್ಟು 15% ಜನ ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುತ್ತಿದ್ದಾರೆ.
ಸುಮಾರು 30% ಮಕ್ಕಳು ಕಡಿಮೆ ತೂಕ ಹೊಂದಿದ್ದಾರೆ.
3000 ಮಕ್ಕಳು ಆಹಾರದ ಕೊರತೆಯಿಂದ ದಿನಾ ಸಾಯುತ್ತಿದ್ದಾರೆ.
(ಮೇಲಿನ ಅಂಕಿಅಂಶಗಳು India state hunger index ಮತ್ತು Global hunger index ನಿಂದ )

ನಮ್ಮ ದೇಶದ ಮಧ್ಯಪ್ರದೇಶ ರಾಜ್ಯದಲ್ಲಿ ಇಥಿಯೋಪಿಯಾ ಮತ್ತು ಸೂಡಾನ್ ದೇಶಗಳಿಗಿಂತಲೂ ಜಾಸ್ತಿ ಜನ ಹಸಿವಿನಿಂದ ನರಳುತ್ತಿದ್ದಾರೆ.

ನಾಚಿಕೆ ಆಗಬೇಕಾದದ್ದೆ, ಅದಕ್ಕೆ ಇನ್ನೂ ಮುಂದುವರಿದ ದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡು ತಿರುಗುತ್ತಿದ್ದೇವೆ.

ನಮ್ಮಲ್ಲಿ,ಯಾವುದೋ ಕಲ್ಲಿಗೆ ಸುರಿಯಲು ಹಾಲು,ಮೊಸರು ಇದೆ,ಇನ್ನಾವುದೋ ಕೋಟಿ ಕೋಟಿ ದೇವರುಗಳಿಗೆ ಇಡಲು ಬೆಣ್ಣೆ , ತುಪ್ಪ, ಹಣ್ಣು ಹಂಪಲುಗಳಿವೆ,ಹೋಮ ಹವಣಗಳಿಗೆ ಸುರಿಯಲು ದವಸ ಧಾನ್ಯಗಳಿವೆ,ಆದರೆ ಅದೇ ಗುಡಿಗಳ ಮುಂದೆ, ಇನ್ನಾವುದೋ ರಸ್ತೆಗಳಲ್ಲಿ , ಎಲ್ಲೋ ಮಾರ್ಕೆಟ್ ಗಳಲ್ಲಿ ಹೊಟ್ಟೆ ಹುಳಗಳಿಗೆ ಆಹಾರವಿಲ್ಲದೆ ಬಿದ್ದುಕೊಂಡಿರುವ ಜೀವಗಳ ಕೇಳುವವರಿಲ್ಲ,

 ನಮ್ಮಲ್ಲಿ ಬೇಕಾದಷ್ಟು ಜನಸಂಖ್ಯೆ ಇದೆ ಒಂದಷ್ಟು ಜನ ಹಸಿವಿನಿಂದ ಸತ್ತರೆ ನಮಗೇನೂ..... !!

ಒಮ್ಮೆ ಯೋಚನೆ ಮಾಡಿ ದೇಶದ ಈ ಪರಿಸ್ಥಿತಿಗೆ ನಾವೂ ಒಂದಷ್ಟು ಹೊಣೆ ಅನ್ನಿಸುದಿಲ್ಲವೆ. ನಾವು ಸೃಷ್ಟಿಸಿಕೊಂಡ ನಿಯಮಗಳು , ನಮ್ಮ ರಾಜಕೀಯದ ಕಿತ್ತಾಟ, ದಿನಾ ಸುಳ್ಳು ಸುದ್ದಿಗಳನ್ನೇ ಹಬ್ಬಿಸುವ ನಮ್ಮ news channel ಗಳು,ನಮ್ಮ ಉಡಾಫೆ ಧೋರಣೆಗಳು, ಎಲ್ಲೋ ಒಂದುಕಡೆ ನಾವೇ ಹೊಣೆ ಹೊತ್ತು ತಲೆಬಾಗಿಸ ಬೇಕಾಗ ಬಹುದು.

ಜನರಿಗೆ ಇಂಟರ್ನೆಟ್ ಉಚಿತ ಒದಗಿಸಲು ಯೋಚಿಸುವ ಸರ್ಕಾರ, ಮೊದಲು ಜನರ ಹಸಿವು ನೀಗಿಸಲು ಪ್ರಯತ್ನಿಸಬೇಕು.ಸಂಘ ಸಂಸ್ಥೆಗಳು ವರ್ಷ ವರ್ಷ ಸಿನಿಮಾ ನಾಯಕ ನಾಯಕಿಯರ, ರಾಜಕೀಯದವರ ಕರೆಸಿ ವಾರ್ಷಿಕೋತ್ಸವ ಮಾಡಿದರೆ ಸಾಲದು, ಜನರ, ಕೈಲಾಗದವರ ಕಷ್ಟ ಅರಿತು ಸಹಾಯ ಮಾಡಬೇಕು. ದೇಶದಲ್ಲಿ ಸರಿಯಾದ ಶೇಖರಣಾ ಘಟಕಗಳಿಲ್ಲದೆ ಎಷ್ಟೋ ಆಹಾರ ಪದಾರ್ಥಗಳು ಹಾಳಾಗುತ್ತಿವೆ ,ಸಮರ್ಪಕವಾದ ಪೂರೈಕೆಯ ವಿಧಾನಗಳಿಲ್ಲದೆ ಅರ್ಧದಲ್ಲೇ ಹಾಳಾಗಿ ಹೋಗುತ್ತಿವೆ ಇವೆಲ್ಲವುಗಳ ನಿರ್ವಹಣೆಯಾಗ ಬೇಕು .ಜವಾಬ್ದಾರಿಯಿಂದ ನುಣುಚಿಕೊಳ್ಳುವ ಯುವ ಜನಾಂಗದ ಸಮರ್ಪಕ ಬಳಕೆಯಾಗ ಬೇಕು. 

ನಾವು ಮನುಷ್ಯರು, ನಮ್ಮ ಮೂಲ ಒಂದೇ, ಹಂಚಿ ತಿನ್ನ ಬೇಕಾದವರು. ಕಿತ್ತಾಡಿಕೊಂಡು ಅಲ್ಲ. ಎಲ್ಲ ಒಂದಾದರೆ ಮತ್ತೊಂದಿಷ್ಟು ಮನೋಬಲವಿದ್ದರೆ ಈ ಸಮಸ್ಯೆಯನ್ನು ಕಿತ್ತೊಗೆಯಬಹುದು.

ಗಾಂಧೀಜಿ ಎಲ್ಲೋ ಹೇಳಿದ ಮಾತು “Be the change you want to see in the world.” 

Are you????.

ಯೋಚನೆ ಮಾಡಿ......... 



.......  . . . . . . . . . . . .. .. . . . . . . .. . . . . . . .. ಸುಕೇಶ್ 

Sunday, January 1, 2017

ಚಿತ್ರ ಬರಹ -೧



ಹಾಯ್,

ಆಗಷ್ಟೇ ಹೇಳಿದ್ದೆ ಹೊಸ ವರುಷದ ಹೊಸ resolution,

ಹಾಗೇ  ಹೀಗೆ ಹೊಳೆವ  ಕೆಲವು ಸಾಲುಗಳನ್ನು ಯಾವುದೋ ಫೋಟೋ ಜೊತೆ ಸೇರಿಸುತ್ತೇನೆ. 

ವಾರಕ್ಕೆ ಒಂದು ಆಗಲಿಲ್ಲವಾದರೂ, ತಿಂಗಳಿಗೊಂದೋ , ಎರಡೋ ಬರೆವ ಸಣ್ಣ ಪ್ರಯತ್ನ . 

ಈ ಬರಹಗಳು ನಿಮ್ಮನ್ನೊಂದಿಷ್ಟು inspire ಮಾಡಿದರೆ ನನಗಷ್ಟೇ ಸಾಕು . 

ನಿಮ್ಮ ಸಲಹೆ ಸೂಚನೆಗಳಿಗೆ ಈ ಬ್ಲಾಗಿನ ಬಾಗಿಲು ಸದಾ ತೆರೆದಿರುತ್ತದೆ.

ಮೊದಲನೆಯದು :

ಅಗ್ನಿಯ ಬಟ್ಟಲು

ಹೆಣ ಸುಡುವ ಬಿಸಿಲು ಕಾಯುತಿತ್ತು ಹೆಣ ಸುಡಲು ನೆಲವ  ಅಗೆದು ಯಾರೋ ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು ವಿವಿಧ ಭಕ್ಷ್ಯ  ...