Saturday, September 9, 2017

ಹೀಗೊಂದು ಸ್ವಗತ

ನೆನಪು ಅರ್ಧ ಬೆಂದ ಜೋಳ
ಮನಸು ಹಸಿದ ತೋಳ
ಬದುಕು ತಳ್ಳೋ ಗಾಡಿ
ಎದೆಯಲ್ಲಿ ನಿಗಿ ನಿಗಿ ಕೆಂಡ, ಕಿಡಿ
ಯಾರೋ ಮೆಲ್ಲಗೆ
ಗಾಳಿ ಹಾಯುತಿದ್ದಾರೆ

ಗಾಡಿ ಸುತ್ತ ನಿಂತ ಜನ
ಜಾತ್ರೆಯಂತೂ ಅಲ್ಲ
ಇಲ್ಲಿ ಸುಟ್ಟ ನೆನಪುಗಳಿಗೆ
ಬೇಡಿಕೆ ಜಾಸ್ತಿ
ಕೆಲವರಂತೂ
ಉಪ್ಪು-ಖಾರ ಹಚ್ಚಿಕೊಳ್ಳುತ್ತಾರೆ.
ಹೊಗೆ ನೆಪ,
ಸುಟ್ಟುಕೊಳ್ಳಲು ಕಾರಣ
ಅದು ನನ್ನ ಮೇಲಿನ ಕೋಪ.

ಜನ ದೂರ ಹೋದಾಗ
ಕೂಗಿ ಕರೆಯೋಣವೆಂದುಕೊಂಡೆ
ತಳ್ಳೋ ಗಾಡಿಯ ಕೀರಲು ಶಬ್ದಕ್ಕೆ
ನನ್ನ ಬೊಬ್ಬೆ ಯಾರಿಗೂ ಕೇಳಲೇ ಇಲ್ಲ
ಕೆಲವರದಂತೂ
ಕಿವುಡತೆಯ ನಾಟಕಕ್ಕೆ,
ನಾನು ಬಯಲು ರಂಗಮಂದಿರ.

ಮೇಲೆ ಯಾಕೋ ಮೋಡ
ಅಳಲು ಶುರುಮಾಡುದರಲ್ಲಿತ್ತು.
ಕಿಡಿ ಆರುವ ಹೊತ್ತು
ಪಕ್ಕದಲ್ಲಿ ಯಾರೋ
ಹಾಗೇ ನಡೆದು ಹೋದ ಹಾಗಿತ್ತು
ಮತ್ತೆ ತಿರುಗಿ ನೋಡದೆ.
ಖಾಲಿ ಗಾಡಿ ,
ಎಂದಿಗಿಂತ ಸ್ವಲ್ಪ ಹಗುರ,
ಹೆಜ್ಜೆ ಯಾಕೋ ಕೊಂಚ ಭಾರ. 

ನೆನಪು ಅರ್ಧ ಬೆಂದ ಜೋಳ
ಮನಸು ಹಸಿದ ತೋಳ
ಬದುಕು ತಳ್ಳೋ ಗಾಡಿ
ತಳ್ಳುತಿದ್ದೇನೆ ಮತ್ತೆ ಪ್ರಯತ್ನ ಮಾಡಿ!!!.




----------------------------------------------------------ಸುಕೇಶ್




ಅಗ್ನಿಯ ಬಟ್ಟಲು

ಹೆಣ ಸುಡುವ ಬಿಸಿಲು ಕಾಯುತಿತ್ತು ಹೆಣ ಸುಡಲು ನೆಲವ  ಅಗೆದು ಯಾರೋ ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು ವಿವಿಧ ಭಕ್ಷ್ಯ  ...