Saturday, January 14, 2017

ಚಿತ್ರ ಬರಹ -೩


ಈ ಲೇಖನ ಬರೆಯೋಕೆ ಯಾಕೋ ಸ್ವಲ್ಪ ನಾಚಿಕೆ ಆಗುತ್ತದೆ,ಸಣ್ಣದಾಗಿ guilt ಕಾಡುತ್ತದೆ ಎಲ್ಲೋ ಯಾರದೋ ಹಸಿವಿನ ಕೂಗು, ಪುಟ್ಟ ಹೊಟ್ಟೆಯ ಚೀರಾಟ ಕೇಳಿದಂತೆ,ಕೊನೆಯ ಉಸಿರು ಎಳೆಯಲು ಶಕ್ತಿ ಇಲ್ಲದೆ, ಯಾರೋ ಮತ್ತೆ ತೆರೆಯದೆ ಕಣ್ಣು ಮುಚ್ಚಿದಂತೆ ಅನಿಸುತ್ತದೆ.

ನಾನು ದುಡಿದದ್ದು, ಎಷ್ಟು ಬೇಕಾದರೂ ತಿನ್ನುತ್ತೇನೆ,ಎಷ್ಟು ಬೇಕಾದರೂ ವೇಸ್ಟ್ ಮಾಡುತ್ತೇನೆ. ಏನಿವಾಗ ?? ಎಷ್ಟೋ ಜನ ಹೀಗೇ ಅಂದುಕೊಂಡು ಹೋಟೆಲ್,ಮನೆಗಳಲ್ಲಿ ಬಿಸಾಡಿದೆಷ್ಟು?. ಒಮ್ಮೆ ಯೋಚಿಸಿ ಪಕ್ಕದ ಬೀದಿಯಲ್ಲೇ ಯಾರೋ ದಿನ ಪೂರ್ತಿ ಸರಿಯಾಗಿ ಊಟಮಾಡದೆ,ಬೇಡಿದವರ ಕೈಯಲ್ಲಿ ಬೈಸಿಕೊಂಡು , ನಿತ್ರಾಣದಿಂದ ನಿದ್ದೆ ಹೋಗಿರಬಹುದು.

ಯಾರು ಹೊಣೆ? ನಾವೇ, ಇನ್ನಾರು?? ದೇಶ ಸ್ವತಂತ್ರಗೊಂಡು ಇಷ್ಟೊಂದು ವರ್ಷವಾದರೂ ನಮಗೆ, ದಾರಿದ್ರ್ಯ,ಹಸಿವು,ಪೌಷ್ಟಿಕ ಆಹಾರದ ಕೊರತೆಗಳನ್ನು ದೂರ ಮಾಡಲಾಗಲಿಲ್ಲ. ಅಂಥವರು ನಾವು smart city , cashless ವ್ಯವಹಾರಗಳ ಬಗ್ಗೆ ಮಾತಾಡುತ್ತೇವೆ . ರಾಜಕೀಯ, ಸಿನೆಮಾ, ಕ್ರಿಕೆಟ್, ಹಾಳು ಮೂಳು ಸುದ್ದಿಗಳ  ಸದ್ದಿನ ಜೊತೆ ಯಾರದೋ ಹಸಿವಿನ ಚೀರಾಟ ನಮಗೆ ಕೇಳುದೇ ಇಲ್ಲ.

ನಿಮಗೊಂದು ಆತಂಕ ಪಡಬೇಕಾದಂಥ ವಿಷಯ ಗೊತ್ತೇ, ನಮ್ಮ ದೇಶ ಪ್ರಪಂಚದಲ್ಲೇ ಅತೀ ಹೆಚ್ಚು ಹಸಿವಿನಿಂದ ಮತ್ತು ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುತ್ತಿರುವವರ ಹೊಂದಿರುವ ದೇಶ ,ಒಟ್ಟು ೧೯೪ ಮಿಲಿಯನ್ ಗೂ ಜಾಸ್ತಿ ಜನ ತುತ್ತು ಅನ್ನಕ್ಕೂ ಗತಿಯಿಲ್ಲದೆ (ಸಾಯುತ್ತಿದ್ದಾರೆ) ಬದುಕುತ್ತಿದ್ದಾರೆ. ಇಡೀ ಪ್ರಪಂಚದಲ್ಲಿ ಒಟ್ಟು ೭೯೫ ಮಿಲಿಯನ್ ಜನ ಒಂದು ಹೊತ್ತಿನ ಅನ್ನಕ್ಕಾಗಿ ಕಾಯುತ್ತಾ ಬದುಕುತ್ತಾರೆ. ನಾಳೆ ಮತ್ತೆ ನಿಮ್ಮ ತಟ್ಟೆಯಲ್ಲಿ ತಿನ್ನದೇ ಉಳಿದ ಆಹಾರ ಬಿಸಾಡುವಾಗ ಈ ಅಂಕಿಅಂಶವನ್ನು ಜ್ಞಾಪಿಸಿಕೊಳ್ಳಿ.

ಇಸ್ಟೇ ಅಲ್ಲ ಈ ಕೆಳಗಿನ ಅಂಕಿಅಂಶಗಳ ನೋಡಿದರೆ ನೀವು ಬೆಚ್ಚಿ ಬೀಳುತ್ತೀರಿ.

ದೇಶದ ಒಟ್ಟು 15% ಜನ ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುತ್ತಿದ್ದಾರೆ.
ಸುಮಾರು 30% ಮಕ್ಕಳು ಕಡಿಮೆ ತೂಕ ಹೊಂದಿದ್ದಾರೆ.
3000 ಮಕ್ಕಳು ಆಹಾರದ ಕೊರತೆಯಿಂದ ದಿನಾ ಸಾಯುತ್ತಿದ್ದಾರೆ.
(ಮೇಲಿನ ಅಂಕಿಅಂಶಗಳು India state hunger index ಮತ್ತು Global hunger index ನಿಂದ )

ನಮ್ಮ ದೇಶದ ಮಧ್ಯಪ್ರದೇಶ ರಾಜ್ಯದಲ್ಲಿ ಇಥಿಯೋಪಿಯಾ ಮತ್ತು ಸೂಡಾನ್ ದೇಶಗಳಿಗಿಂತಲೂ ಜಾಸ್ತಿ ಜನ ಹಸಿವಿನಿಂದ ನರಳುತ್ತಿದ್ದಾರೆ.

ನಾಚಿಕೆ ಆಗಬೇಕಾದದ್ದೆ, ಅದಕ್ಕೆ ಇನ್ನೂ ಮುಂದುವರಿದ ದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡು ತಿರುಗುತ್ತಿದ್ದೇವೆ.

ನಮ್ಮಲ್ಲಿ,ಯಾವುದೋ ಕಲ್ಲಿಗೆ ಸುರಿಯಲು ಹಾಲು,ಮೊಸರು ಇದೆ,ಇನ್ನಾವುದೋ ಕೋಟಿ ಕೋಟಿ ದೇವರುಗಳಿಗೆ ಇಡಲು ಬೆಣ್ಣೆ , ತುಪ್ಪ, ಹಣ್ಣು ಹಂಪಲುಗಳಿವೆ,ಹೋಮ ಹವಣಗಳಿಗೆ ಸುರಿಯಲು ದವಸ ಧಾನ್ಯಗಳಿವೆ,ಆದರೆ ಅದೇ ಗುಡಿಗಳ ಮುಂದೆ, ಇನ್ನಾವುದೋ ರಸ್ತೆಗಳಲ್ಲಿ , ಎಲ್ಲೋ ಮಾರ್ಕೆಟ್ ಗಳಲ್ಲಿ ಹೊಟ್ಟೆ ಹುಳಗಳಿಗೆ ಆಹಾರವಿಲ್ಲದೆ ಬಿದ್ದುಕೊಂಡಿರುವ ಜೀವಗಳ ಕೇಳುವವರಿಲ್ಲ,

 ನಮ್ಮಲ್ಲಿ ಬೇಕಾದಷ್ಟು ಜನಸಂಖ್ಯೆ ಇದೆ ಒಂದಷ್ಟು ಜನ ಹಸಿವಿನಿಂದ ಸತ್ತರೆ ನಮಗೇನೂ..... !!

ಒಮ್ಮೆ ಯೋಚನೆ ಮಾಡಿ ದೇಶದ ಈ ಪರಿಸ್ಥಿತಿಗೆ ನಾವೂ ಒಂದಷ್ಟು ಹೊಣೆ ಅನ್ನಿಸುದಿಲ್ಲವೆ. ನಾವು ಸೃಷ್ಟಿಸಿಕೊಂಡ ನಿಯಮಗಳು , ನಮ್ಮ ರಾಜಕೀಯದ ಕಿತ್ತಾಟ, ದಿನಾ ಸುಳ್ಳು ಸುದ್ದಿಗಳನ್ನೇ ಹಬ್ಬಿಸುವ ನಮ್ಮ news channel ಗಳು,ನಮ್ಮ ಉಡಾಫೆ ಧೋರಣೆಗಳು, ಎಲ್ಲೋ ಒಂದುಕಡೆ ನಾವೇ ಹೊಣೆ ಹೊತ್ತು ತಲೆಬಾಗಿಸ ಬೇಕಾಗ ಬಹುದು.

ಜನರಿಗೆ ಇಂಟರ್ನೆಟ್ ಉಚಿತ ಒದಗಿಸಲು ಯೋಚಿಸುವ ಸರ್ಕಾರ, ಮೊದಲು ಜನರ ಹಸಿವು ನೀಗಿಸಲು ಪ್ರಯತ್ನಿಸಬೇಕು.ಸಂಘ ಸಂಸ್ಥೆಗಳು ವರ್ಷ ವರ್ಷ ಸಿನಿಮಾ ನಾಯಕ ನಾಯಕಿಯರ, ರಾಜಕೀಯದವರ ಕರೆಸಿ ವಾರ್ಷಿಕೋತ್ಸವ ಮಾಡಿದರೆ ಸಾಲದು, ಜನರ, ಕೈಲಾಗದವರ ಕಷ್ಟ ಅರಿತು ಸಹಾಯ ಮಾಡಬೇಕು. ದೇಶದಲ್ಲಿ ಸರಿಯಾದ ಶೇಖರಣಾ ಘಟಕಗಳಿಲ್ಲದೆ ಎಷ್ಟೋ ಆಹಾರ ಪದಾರ್ಥಗಳು ಹಾಳಾಗುತ್ತಿವೆ ,ಸಮರ್ಪಕವಾದ ಪೂರೈಕೆಯ ವಿಧಾನಗಳಿಲ್ಲದೆ ಅರ್ಧದಲ್ಲೇ ಹಾಳಾಗಿ ಹೋಗುತ್ತಿವೆ ಇವೆಲ್ಲವುಗಳ ನಿರ್ವಹಣೆಯಾಗ ಬೇಕು .ಜವಾಬ್ದಾರಿಯಿಂದ ನುಣುಚಿಕೊಳ್ಳುವ ಯುವ ಜನಾಂಗದ ಸಮರ್ಪಕ ಬಳಕೆಯಾಗ ಬೇಕು. 

ನಾವು ಮನುಷ್ಯರು, ನಮ್ಮ ಮೂಲ ಒಂದೇ, ಹಂಚಿ ತಿನ್ನ ಬೇಕಾದವರು. ಕಿತ್ತಾಡಿಕೊಂಡು ಅಲ್ಲ. ಎಲ್ಲ ಒಂದಾದರೆ ಮತ್ತೊಂದಿಷ್ಟು ಮನೋಬಲವಿದ್ದರೆ ಈ ಸಮಸ್ಯೆಯನ್ನು ಕಿತ್ತೊಗೆಯಬಹುದು.

ಗಾಂಧೀಜಿ ಎಲ್ಲೋ ಹೇಳಿದ ಮಾತು “Be the change you want to see in the world.” 

Are you????.

ಯೋಚನೆ ಮಾಡಿ......... 



.......  . . . . . . . . . . . .. .. . . . . . . .. . . . . . . .. ಸುಕೇಶ್ 

Tuesday, January 10, 2017

Sunday, January 1, 2017

ಚಿತ್ರ ಬರಹ -೧



ಹಾಯ್,

ಆಗಷ್ಟೇ ಹೇಳಿದ್ದೆ ಹೊಸ ವರುಷದ ಹೊಸ resolution,

ಹಾಗೇ  ಹೀಗೆ ಹೊಳೆವ  ಕೆಲವು ಸಾಲುಗಳನ್ನು ಯಾವುದೋ ಫೋಟೋ ಜೊತೆ ಸೇರಿಸುತ್ತೇನೆ. 

ವಾರಕ್ಕೆ ಒಂದು ಆಗಲಿಲ್ಲವಾದರೂ, ತಿಂಗಳಿಗೊಂದೋ , ಎರಡೋ ಬರೆವ ಸಣ್ಣ ಪ್ರಯತ್ನ . 

ಈ ಬರಹಗಳು ನಿಮ್ಮನ್ನೊಂದಿಷ್ಟು inspire ಮಾಡಿದರೆ ನನಗಷ್ಟೇ ಸಾಕು . 

ನಿಮ್ಮ ಸಲಹೆ ಸೂಚನೆಗಳಿಗೆ ಈ ಬ್ಲಾಗಿನ ಬಾಗಿಲು ಸದಾ ತೆರೆದಿರುತ್ತದೆ.

ಮೊದಲನೆಯದು :

Saturday, December 31, 2016

ಗೋಡೆ ಮೇಲೆ ಹೊಸ ಕ್ಯಾಲೆಂಡರ್

ಸೂರ್ಯ ಯಾಕೋ ಚಳಿಗೆ ಸ್ವಲ್ಪ ಲೇಟ್ ಆಗಿನೇ ಏಳುವನೇನೋ , ಹೊಸ ವರುಷದ ಹೊಸ resolution  ನ ಮರೆತು. ಬಹುಶಃ ಅಲಾರಾಂ snooze ಮಾಡಿರಬೇಕು ನಮ್ಮ ನಿಮ್ಮಂತೆ.
ಮುಂಜಾನೆ ಎದ್ದು ಬಾಗಿಲಾಚೆ ನೋಡಿದೆ, ಯಾರೋ ಯಾವುದೋ ಖುಷಿಗೆ ಸುಟ್ಟು ಬಿಟ್ಟ ಒಂದಷ್ಟು ಪಟಾಕಿಯ ಪೇಪರ್ ಗಳು,ಹರಿದ ಹಳೆಯ ಕ್ಯಾಲೆಂಡರ್ ನ ಚೂರು.

ವರುಷ ಹೇಗೆ ಉರುಳಿ ಹೋಯಿತು  ......... ??

ಇದು ಒಂದು ಪ್ರಶ್ನೆಯೇ!! ಇಷ್ಟೊಂದು ವರುಷಗಳು ಮುಗಿದೇ ಹೋದವು , ಆಗ ಮೂಡದ ಪ್ರಶ್ನೆ ಈಗ ಯಾಕೆ?? ಬಹುಶಃ ಮುಂದಿನ ವರುಷ ಮತ್ತೆ ಇದೇ ಪ್ರಶ್ನೆ ಕಾಡಬಹುದು, ಉತ್ತರ ಹುಡುಕುತ್ತ ಮತ್ತೆ ಅದೇ ಕಳೆದು ಹೋಗ ಬಹುದು .

ಒಂದು ವರುಷ ಏನು ಮಾಡಿದೆ??, ಹಾಗೆ ಯೋಚಿಸಿದೆ , ಕಳೆದ ವರುಷದ ಹೊಸ ವರುಷ ಆಚರಣೆಯಿಂದ ನಿನ್ನೆ ಸಂಜೆ ತಿಂದ ice cream  ವರೆಗೆ ಮನದ ಪರದೆ ಮೇಲೆ ಎಲ್ಲ ಹಾಗೆ slide ಆಗುತಿತ್ತು, ಸಂಭ್ರಮಿಸಿಕೊಳ್ಳಲು ಕಾರಣ ಹುಡುಕುತ್ತಿದ್ದೆ.

ಬದುಕು ಹುಡುಕಾಟ
ಹುಡುಕದೆ
ಕಣ್ ಮುಚ್ಚಿಕೊಂಡರೆ
ನಿತ್ಯ ಪರದಾಟ !!!!.

ರಾತ್ರಿ ತುಂಬಾ ಪಟಾಕಿ ಸದ್ದು, ಮುಗಿದ ಸಾರಾಯಿ ಬಾಟಲಿಗಳೆಷ್ಟೋ ,ಸಂಭ್ರಮಿಸಲು ಕಾರಣ ಹುಡುಕೋ ಜನ.  ಬೆಳಗ್ಗೆ ಎದ್ದು ನೋಡಿದರೆ ಮೊಬೈಲ್ ಪರದೆ ತುಂಬ forwarded ಮೆಸೇಜುಗಳು.

ಮುಂಜಾನೆಯ ಮಂಜು ಕಂಠಪೂರ್ತಿ ಕುಡಿದು ಸೂರ್ಯ ಎದ್ದು ಬಂದ. ಇಳಿಯದ ಅಮಲಿಗೆ ಮುಖದ ಬಣ್ಣದ ಪುರಾವೆ. ಮತ್ತೊಂದು ಹೊಸ ವರುಷದ ಮುಂಜಾವು.

ಗೋಡೆ ಮೇಲೆ ಹೊಸ ಕ್ಯಾಲೆಂಡರ್ .

ಬದಲಾದ
ಕ್ಯಾಲೆಂಡರ್ನಲ್ಲಿ
ಬದಲಾ(ಗುವ!!)ಗದ
ದಿನಗಳು !!!


ಮತ್ತೆ ಕೆಂಪು , ಕಪ್ಪು ಬಣ್ಣದಲ್ಲಿ ರಾರಾಜಿಸುತ್ತಿತ್ತು ಮತ್ತೊಂದು ವರುಷ, ಎಲ್ಲೋ ಓದಿದಿದ ನೆನಪು

"Time is the most precious commodity and invest it only in those activities that truly count" 


                     ಎಲ್ಲರಿಗು ಹೊಸ ವರುಷದ ಶುಭಾಶಯಗಳು

                  Be Healthy, Be Happy , Be Blessed .

  ಓಹ್ ಮರೆತೇ ಬಿಟ್ಟೆ ನನ್ನ ಹೊಸ ವರುಷದ ಹೊಸ resolution.............?

                    watch this blog coming soon.


Tuesday, December 6, 2016

ಚಂದ್ರ ಮತ್ತು ಜಾರಿದ ಭೂಮಿಯ ಸೆರಗು



ದೋಚ ಬಂದರೆ
ಯಾರೋ ಭೂಮಿಯ
ಮೇಲೆ ಚಂದ್ರ,
ಲಾಂದ್ರ ಹಿಡಿದು ಕಾಯುತ್ತಿದ್ದ
ಬಿಟ್ಟ ಕಣ್ಣು ಬಿಟ್ಟು
ಒಂದೇ ಕಡೆ ನೆಟ್ಟು.

ಹಗಲೆಲ್ಲ ಬಿಸಿಲ ರವೆ.
ಹರಿದ ರವಿಕೆ
ಜಾರೋ ಸೆರಗಿಗೆ
ಹಾರೋ ಹಕ್ಕಿಯ ಪಿನ್ನು,
ಸುರಿದ ಬೆವರೂ ಬಿಡದೆ
ನೆಕ್ಕಿ ಹೋದ ಸೂರ್ಯ
ಸಂಜೆ ಕೋಪಗೊಂಡು
ಕೆಂಪಾಗಿದ್ದ ಸಾಲದುದಕ್ಕೆ.

ಗೂಡು ಸೇರಿದ ಹಕ್ಕಿ
ಕಳಚಿದ ಪಿನ್ನು
ತುಂಟ ಗಾಳಿ ಬಿಡಬಹುದೆ ಇನ್ನು.
ಸರಿದ ಸೆರಗು
ಎಂಥ ಬೆರಗು
ಆಹ್ ಕಣ್ ತಪ್ಪಿ ಅತ್ತ ನೋಡಿದ ಚಂದ್ರ
ಏನೋ ಕಂಡ, ನಾಚಿಕೊಂಡ.

ಮೇಲೆ ನಿಂತು ಕಾಯುದ್ದಷ್ಟೇ ಕೆಲಸ
ಬೇಲಿ ತೋಟ ಬಯಸುವ
ಹಾಗಿಲ್ಲ,
ನನಗೂ ನಿನಗೂ ಒಂದೇ ಕಾನೂನು.
ಪಾಳಿ ಮುಗಿಸಿದ
ಒಂಚೂರೆ ಸವೆಸಿ;
ಕ್ಷೀಣಿಸುದು,ಮತ್ತೆ ಬೆಳೆಯುದು
ಹೇಗೆಂದು ತಿಳಿಸಿ.

ಯಾರೋ ನೋಡುವ ಮೊದಲು
ಹಾರಿ ಬಂದ ಹಕ್ಕಿ
ಜಾರಿದ ಸೆರಗಿಗೆ ಪಿನ್ನು.
ಓ ನಿನ್ನೆ ಕೋಪ
ಇಳಿಯಲಿಲ್ಲ ಇನ್ನೂ
ರಮಿಸು ಭೂಮಿ
ನೀ ನಿರಂತರ ಪ್ರೇಮಿ.























-----------------------------------------------------------------------ಸುಕೇಶ್ 









Tuesday, November 1, 2016

ಮತ್ತೆ ಕೆಲವು ಹನಿಗಳು .......

  

    ಬಿಸಿಲು 

ಸೂರ್ಯ ಕಿಚಾಯಿಸಿ
ನಕ್ಕಿದ್ದ
ಭೂಮಿ ಬೆದರಿ
ಬೆವರುತ್ತಿತ್ತು !!!!


                                              
                                               
                                               
                                              
                                               ಗಡಿಯಾರ 

                                              ನೀನು ತಿರುಗಿದ್ದಕ್ಕೆ
                                              ನನ್ನ
                                             ಸಮಯವೆಲ್ಲ
                                             ಖಾಲಿಯಾಗಿದೆ.


ಹಣೆಬರಹ 

ಯಾರೋ
ಹಾಗೇ, ಹೀಗೆ
ಎಂದೋ ಬರೆದಿಟ್ಟ
ಶೀರ್ಷಿಕೆ .


                                            
                   ಪಾಲಿಸಿ 

 ದಿನಾ, ನಾ ಆಫೀಸ್ ಗೆ ಹೊರಟಾಗ
       ನನ್ನವಳು ಅನ್ನುತ್ತಿದ್ದಳು,
  "ರೀ ರಸ್ತೆ ನಿಯಮ ಪಾಲಿಸಿ"
        ಈಗ ಹೇಳುದೇ ಇಲ್ಲ
      ಕಾರಣ ನಾ ಮಾಡಿದ್ದೇನೆ
         "ವಿಮಾ ಪಾಲಿಸಿ"!!.




       ಪರವಾನಿಗೆ 

ಯಾರು ಕೊಟ್ಟರು ನಿನಗೆ
ನನ್ನ ಮನದೊಳಗೆ
ನೂರಾರು ಕನಸ ತುಂಬಿಸಲು
ವಿಶೇಷ ಪರವಾನಿಗೆ??.




-----------------------------------------------------------------ಸುಕೇಶ್ 

ಅಗ್ನಿಯ ಬಟ್ಟಲು

ಹೆಣ ಸುಡುವ ಬಿಸಿಲು ಕಾಯುತಿತ್ತು ಹೆಣ ಸುಡಲು ನೆಲವ  ಅಗೆದು ಯಾರೋ ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು ವಿವಿಧ ಭಕ್ಷ್ಯ  ...