Monday, January 15, 2018

ಕಾಯಿನ್ ಬೂತ್ ನಲ್ಲಿ ಕಳೆದು ಹೋದ ಕಹಾನಿಗಳು ........ ...



ಕೈಯಲೊಂದಿಷ್ಟು ಒಂದು ರೂಪಾಯಿ ನಾಣ್ಯಗಳನ್ನು ಹಿಡಿದುಕೊಂಡು ಕಾಯಿನ್ ಫೋನ್ ನ ಮುಂದೆ ನಿಂತು ಅತ್ತಕಡೆಯಿಂದ ಬರುವ  "ಹಲೋ" ಗೆ ಕಾಯುವಾಗ ಫೋನ್ ಗಿಂತ  ಜಾಸ್ತಿ ವೇಗದಲ್ಲಿ  ಎದೆ ಬಡಿದು  ಕೊಳ್ಳುತಿತ್ತು. ಅಂದು ಮಾತಾಡಲು ಎಷ್ಟೊಂದು ವಿಷಯಗಳಿದ್ದರು ಅದಕ್ಕಾಗಿ ಅದೆಷ್ಟು ಸಮಯವಿದ್ದರೂ ಕೈಯಲ್ಲಿದ್ದದ್ದು ಒಂದ್ದಿಷ್ಟೇ ನಾಣ್ಯಗಳು . ಪ್ರತೀ ನಿಮಿಷ ಮುಗಿಯುವಾಗ ಆಗುವ ಸದ್ದಿಗೆ ಕೈಯಾಲ್ಲಿದ್ದ ಮತ್ತೊಂದು ನಾಣ್ಯ ಬಲಿಯಾಗುತಿತ್ತು. ಕೆಲವೊಮ್ಮೆಯಂತೂ  ಒಂದು ನಿಮಿಷದ ಮೌನಕ್ಕೆ,ಅತ್ತಕಡೆಯಿಂದ ಬರುವ ಉಸಿರಾಟದ ಸದ್ದಿಗೆ "ಮತ್ತೆ ?" ಅನ್ನುವ ಎಂದೂ ಮುಗಿಯದ ಪ್ರಶ್ನೆಗೆ ಕೈಯಲ್ಲಿದ್ದ ಅಷ್ಟೂ ನಾಣ್ಯಗಳು ಕಾಯಿನ್ ಬೂತ್ ನ ಹೊಟ್ಟೆ ಸೇರಿಕೊಳ್ಳುತ್ತಿದ್ದವು.ಮತ್ತೂ ಏನೋ ಮಾತಾಡುವ ಹಂಬಲದಿಂದ ಕಿಸೆಯಲ್ಲಿ ಕೈಯಾಡಿಸಿದೆರೆ ನಾಣ್ಯಗಳ ಸದ್ದಿಲ್ಲ.ಕಡಿದುಕೊಂಡ ತಂತಿಗೆ ಎದೆ ಜೋತು ಬಿದ್ದಿತ್ತು.

                                                   ******************
               
ಮೊನ್ನೆ ಹೀಗೆ ಮಾತಾಡುವಾಗ ರೂಮ್ ಗೆ ಬಂದಿದ್ದ ಗೆಳೆಯನ ಕೇಳಿದೆ " ರೀ ನಿಮ್ಮ ಲವ್ ಸ್ಟೋರಿ ಹೇಳಿ" ಹೊರಗಡೆ ತಣ್ಣಗೆ ಗಾಳಿ ಬೀಸುತಿತ್ತು ಒಳಗಡೆ ಸೇರಿದ್ದ ಒಂದು ಪೆಗ್ ಮೆಲ್ಲಗೆ ಕಥೆ ಶುರುಮಾಡಿತ್ತು. " ಅವಳು ನಮ್ಮ ಮನೆಗೆ ಬಂದಿದ್ಳು ಯಾವುದೋ function ಗೆ  , ನನ್ನ ತಂಗಿದ್ದು ಫ್ರೆಂಡ್ ಕಣೋ " ಇವಳನ್ನು ಎಲ್ಲೋ ನೋಡಿದೆ ಅನ್ನಿಸಿತು " ನಿಮ್ಮದೇ ಕಾಲೇಜು " ಮಾತಿಗೆ ಶುರುವಿಟ್ಟಳು. ಎಲ್ಲಿ ನಿಮ್ಮ ಮನೆ? " ಇದೇ  ಪಕ್ಕದ ಹಳ್ಳಿಯ ಎರಡನೇ ಬೀದಿ".

"ಎಷ್ಟು ಗಂಟೆಯ ಬಸ್ "

ಅಷ್ಟೇ ನನ್ನ ದಿನಚರಿ ಬದಲಾಗಿತ್ತು. ಅದೇ ಬಸ್ ನನ್ನ ಮನೆ ಪಕ್ಕದ ಸ್ಟಾಂಡ್ ನಲ್ಲಿ ಬರುತಿತ್ತು, ಆದರೂ ನನಗೆ ಅಷ್ಟೊಂದು ಹೊತ್ತು ಕಾಯುವ ವ್ಯವಧಾನವೆಲ್ಲಿ?!!. ಪಕ್ಕದ ಹಳ್ಳಿಯ ಎರಡನೇ ಬೀದಿ ನನ್ನ ಕಾಲೇಜು ಮುಗಿವವರೆಗಿನ ಬಸ್ stop ಆಗಿತ್ತು, ಜೊತೆಗೆ ಕೂತರು ಮಾತಾಡಲೊಂದಿಷ್ಟು ಸಂಕೋಚವೇ ಇತ್ತು.ವಾರಾಂತ್ಯದ ಅಜ್ಜಿಮನೆಗೆ ಹೋಗುವ ಬಸ್ ಗೆ ಜೊತೆಗೆ ಕಾಯುತ್ತಿದ್ದೆವು. ಜೊತೆಗೆ ನಡೆದ ಪ್ರತೀ ಹೆಜ್ಜೆಗಳಿಗೆ ಒಂದು, ನಗುವಿತ್ತು,ಕತೆಯಿತ್ತು.

PUC ಅದು ಹೇಗೋ ಸದ್ದೇ ಇಲ್ಲದೆ ಜಾರಿತ್ತು." ನಾನು ಇಂಜಿನಿಯರ್ ಮಾಡುತ್ತೇನೆ, ನೀನು ಬಾರೋ"
ನಮ್ಮ ಹಣೆಯಲ್ಲಿ ಇಂಜಿನಿಯರಿಂಗ್ ಎಲ್ಲಿ ಬರೆದಿತ್ತು, ಸದ್ಯಕ್ಕೆ PUC ಪಾಸಾಗುದಷ್ಟೇ ಬದುಕಿನ ಗುರಿಯಾಗಿತ್ತು.ಹೇಗೋ PUC ಪಾಸಾಗಿತ್ತು, ಗೆಳೆಯರೆಲ್ಲ ಬಿ. ಫಾರ್ಮ ಮಾಡುವ ಎಂದರು ನಾನು ಅವರ ಜೊತೆ ಸೇರಿಕೊಂಡೆ . ಆಕೆ ಎಲ್ಲೋ ಇಂಜಿನಿಯರಿಂಗ್ ಸೇರಿದಳು, ಯಾವ ಕಾಲೇಜು ಎಂದು ಗೊತ್ತಿಲ್ಲ, ಆವಾಗ ಎಲ್ಲ ಈ ಮೊಬೈಲ್ ಫೋನ್ ಇರ್ಲಿಲ್ಲ ಅಲ್ವ . ನಮ್ಮ ಏರಿಯಾದಲ್ಲಿ ಇರುವುದೇ ನಾಲ್ಕು ಇಂಜಿನಿಯರಿಂಗ್ ಕಾಲೇಜುಗಳು. ಒಂದು ದಿನ ಗೆಳೆಯನನ್ನು ಕರೆದುಕೊಂಡು ನಾಲ್ಕೂ ಕಾಲೇಜಿನ ಗೇಟ್ ಕಾದೆ ಆದರೆ ಅವಳ ಸುಳಿವಿಲ್ಲ. ಆದರೆ ಒಂದು ದಿನ ಊರ ಪಾರ್ಕ್ ನಲ್ಲಿ ಒಬ್ಬನೇ ಕುಳಿತಿದ್ದಾಗ ಅವಳ ತಮ್ಮ ಬಂದ "ಕುರುಡನಿಗೆ ಕಣ್ಣು ಬಂದ ಹಾಗೆ ಆಯಿತು". " ಏ ನಿನ್ನ ಅಕ್ಕ ಯಾವ ಕಾಲೇಜ್ ಗೆ ಹೋಗುವುದು ಈಗ ?" .

"ಕಾಲೇಜು ಹೆಸರು ನಂಗೊತ್ತಿಲ್ಲ ಇಲ್ಲೇ ಪಕ್ಕದಲ್ಲಿ ".
ಚಂದದ ಅಕ್ಕ ಇದ್ರೆ ತಮ್ಮನಿಗೆ ಸ್ವಲ್ಪ ಧಿಮಾಕು ಜಾಸ್ತಿ. ಕಣ್ಣು ಬಂದು ಏನು ಪ್ರಯೋಜನ ನೋಡೋಕೆ ಬೆಳಕು ಇರ್ಲಿಲ್ಲ.

ಕಾಲದ ಚಕ್ರ ಉರುಳುತಿತ್ತು , ನಾ ನನ್ನ ಹೃದಯನ ಎಲ್ಲೋ ಕಟ್ಟಿ ಇಟ್ಟಿದ್ದೆ ಇನ್ನದರ ಅವಶ್ಯಕತೆ ಇಲ್ಲ ಅನ್ನುವ ಹಾಗೆ. ಕೋತಿ ಹೃದಯ ಮರದಲ್ಲಿ ಅಂತೆ,  "ನನ್ನ ಹೃದಯ ?".

ತಂತ್ರಜ್ಞಾನ ಬೆಳೆಯುತಿತ್ತು, ಸ್ಮಾರ್ಟ್ ಫೋನ್ , ಇಂಟರ್ನೆಟ್ ಎಲ್ಲರ ಕೈಯಲ್ಲಿ ತಿರುಗಾಡ ತೊಡಗಿತು. ಹಾಗೆ ಒಂದು ದಿನ ಫೇಸ್ಬುಕ್ ನಲ್ಲಿ ಒಂದು ಮೆಸೇಜ್ ಬಂತು , "ಹಾಯ್ ... ನೆನಪಿದೆಯ ?", ಅದೇ ಹುಡುಗಿ, ಅದೇ ದಿನ ಸಂಜೆ ಭೇಟಿಯಾದೆ. ಆಕೆ ಇಂಜಿನಿಯರಿಂಗ್ ಮುಗಿಸಿ ಇಲ್ಲೇ ಐಟಿ  ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದಳು. " ನಿಮ್ಮ ಮನೆಗೆ ಫೋನ್ ಮಾಡಿದೆ ಸುಮಾರು ಸರ್ತಿ , ಯಾರೋ ಹೆಂಗಸು ಫೋನ್ ತೆಗೆಯುತ್ತಿದ್ದರು , ಹಾಗೆ ಕಟ್ ಮಾಡುತಿದ್ದೆ ಯಾಕೋ ಭಯ ಆಗುತಿತ್ತು." ಮನೆಯಲ್ಲಿದ್ದ ಹಳೇ ಲ್ಯಾಂಡ್ ಲೈನ್ ಫೋನ್ ಮತ್ತು ಫೋನ್ ರಿಂಗಾದ ಕೂಡಲೇ ಓಡಿ ಬಂದು ರಿಸೀವ್ ಮಾಡುತಿದ್ದ ಅತ್ತಿಗೆ ಮೇಲೆ ಒಟ್ಟಿಗೆ ಕೋಪ ಬಂತು. "

"ನಿನ್ನ ತಮ್ಮ ಸಿಕ್ಕಿದ, ನಿನ್ನ ಬಗ್ಗೆ ಕೇಳಿದ್ದಕ್ಕೆ ಗೊತ್ತಿಲ್ಲ ಅಂದ".ಆಕೆ ಮನೆಗೆ ಹೋಗಿ ಅದೆಷ್ಟು ಬೈದಿರಬಹುದೊ . ನನಗೊ ಅದೇ ಬೇಕಿತ್ತು, ಸೇಡು ತೀರಿಸಿಕೊಳ್ಳ ಬೇಕಿತ್ತು . " ನಿಮ್ಮ ಮದುವೆ ಆಯ್ತಾ ?" ಇಲ್ಲ ಮುಂದಿನ ತಿಂಗಳು ೧೮ ಕ್ಕೆ, ನನ್ನ ಸಂಬಂಧಿಕರ ಮಗಳೇ . "ನಿನ್ನದು ?" ಕೇಳಬೇಕೆಂದು ಕೊಂಡವನಿಗೆ ಅವಳ ಕತ್ತಿನಲ್ಲಿ ನೇತಾಡುತಿದ್ದ ಕರಿಮಣಿ ಉತ್ತರ ಹೇಳಿತ್ತು. ಮನೆ ಕಡೆ ಬನ್ನಿ ಒಮ್ಮೆ ನಮ್ಮವರ ಪರಿಚಯ ಆದ ಹಾಗೆ ಆಗುತ್ತದೆ . " ಸರಿ " . ಕುಡಿಯುತ್ತಿದ್ದ ಕಾಫಿ ಯಾಕೋ ಎಂದಿಗಿಂತ ಜಾಸ್ತಿ ಕಹಿ ಇದ್ದ ಹಾಗೆ ಇತ್ತು. ನನಗೆ ಅವಳನ್ನು ಇವತ್ತು ಕಂಡ ಖುಷಿಗಿಂತ ಮೊದಲೇ ಸಿಗಬಾರದಿತ್ತೆ ಎನ್ನುವ ದುಃಖ ಜಾಸ್ತಿ ಕಾಡುತಿತ್ತು.

"ನನ್ನ ಅಜ್ಜಿಗೆ ಮೈ ಹುಷಾರಿಲ್ಲ ನಿಮ್ಮ ಗಾಡಿ ತಗೊಂಡು ಮನೆಗೆ ಬನ್ನಿ ಪ್ಲೀಸ್ " ಒಂದು ದಿನ ಆಕೆ ಅಳುತ್ತಾ ಫೋನ್ ಮಾಡಿದಳು. ಹಳೆ ಹುಡುಗಿಯ ಕಣ್ಣೀರು ಕೇಳಿಸಿಕೊಂಡು  ಸುಮ್ಮನಿರಲಾಗದೆ ಅವರ ಮನೆಗೆ ಹೋದೆ. ಅವಳ ತಮ್ಮ, ನನ್ನ ಲೈಫ್ ನ ವಿಲನ್  ಅಲ್ಲೇ ಮನೆಯಲ್ಲಿದ್ದ ಚೋಟುದ್ದ ಇದ್ದವ ನನ್ನ ಎತ್ತರಕ್ಕೆ ಬೆಳೆದಿದ್ದ , "ಚೆನ್ನಾಗಿದ್ದೀರಾ ಅಂಕಲ್ ಅಂದ ". ನರ್ಸ್ ಇಂಜೆಕ್ಷನ್ ಕೊಟ್ಟು ನೋವಾಗಿಲ್ಲ ತಾನೇ ಅಂದ ಹಾಗಿತ್ತು ಅವನ ಮಾತು . " ಎಂಥಾ ದೊಡ್ಡ ತಪ್ಪು ಮಾಡಿದೆ ತಮ್ಮ ನೀನು ಅಂದುಕೊಂಡೆ ".

ಅಜ್ಜಿ ಉಬ್ಬಸದಿಂದ ಏದುಸಿರು ಬಿಡುತ್ತಿದ್ದರು, ಪಕ್ಕದಲ್ಲೇ ಇದ್ದ ನರ್ಸಿಂಗ್ ಹೋಂ ಗೆ ಸೇರಿಸಿದೆ ಸ್ವಲ್ಪ ಹುಷಾರಾದವರು ಪಕ್ಕಕ್ಕೆ ಕರೆಸಿಕೊಂಡು ಮಾತಿಗಿಳಿದರು ," ನನ್ನ ಮೊಮ್ಮಗಳನ್ನೇ ಮದುವೆ ಆಗುತ್ತೀಯ ಅಂದುಕೊಂಡಿದ್ದೆ , ಅವಳು ಎಲ್ಲಾ ಹೇಳಿದ್ಲು ನನಗೆ , ಅವಳ ಮದುವೆ ಟೈಂನಲ್ಲಿ ತುಂಬಾ ಬೇಜಾರು ಮಾಡಿಕೊಂಡು ಇದ್ಲು , ಇಷ್ಟು ಸಣ್ಣ ಊರಲ್ಲಿ ಅದೆಲ್ಲೋ ಹೋದೆ ನೀನು ?"

ಅಜ್ಜಿಗೇನು ಗೊತ್ತು ಬೆಂಗಳೂರು ಬೆಳೆದು ಎಷ್ಟು ದೊಡ್ಡದಾಗಿದೆ ಎಂದು. ಯಾಕೋ ಈ ಫೇಸ್ಬುಕ್ , ವಾಟ್ಸ್ಯಾಪ್ ಗಳು ೧೫ ವರುಷಗಳ ಹಿಂದೆ ಇದ್ದಿದ್ದರೆ ? ಎಂದೆಣಿಸಿತು . ಮನೆಯಿಂದ ಮಡದಿ ಫೋನ್ ಮಾಡಿದಳು " ಬಂದೆ ಇರು ಫ್ರೆಂಡ್ ಅಜ್ಜಿಗೆ ಹುಷಾರಿಲ್ಲ ಆಸ್ಪತ್ರೆಯಲ್ಲಿ ಇದ್ದೇನೆ".  ನಾ ಹೇಳಿದ ಮಾತು ಆಕೆಗೊ ಕೇಳಿಸಿರಬೇಕು, ಕಣ್ಣಲ್ಲೇ ಥ್ಯಾಂಕ್ಸ್ ಹೇಳಿದಳು .

 ನನಗು ಮಾತು ಬೇಡವಾಗಿತ್ತು.

ನನಗೆ ನನ್ನದೇ ಆದ ಬದುಕಿದೆ , ಅವಳಿಗೆ ಅವಳದ್ದು. ಬಾಳ ದಾರಿಯಲ್ಲಿ ಜೊತೆಗೆ ಒಂದಿಷ್ಟು ದೂರ ನಡೆದು ,ಯಾವುದೋ ನಿಲ್ದಾಣದ ಜನ ಜಂಗುಳಿಯ ನಡುವೆ ಕಣ್ಮರೆಯಾದವಳು ಆಕೆ. ಈಗ ಮತ್ತೆ ಇನ್ನಾವುದೋ ನಿಲ್ದಾಣದಲ್ಲಿ ಮತ್ತೆ ಪ್ರತ್ಯಕ್ಷವಾದರೆ?. ಬದುಕು, ಪಯಣ ಹಿಂದಿನಂತಿಲ್ಲವಲ್ಲ."ಫ್ರೆಂಡ್ " ಅಷ್ಟೇ, ಮನಸಿನೊಳಗೆ ಅಂದುಕೊಂಡರು ಆ ಮಾತು ನನಗೆ ಕೇಳುವಷ್ಟು ಜೋರಾಗೆ ಹೇಳಿದ್ದೆ.

                                                         ********************

"ಅಮ್ಮ ಇವತ್ತು ಶುಕ್ರವಾರ ಅಣ್ಣನ ಫೋನ್ ಬರುತ್ತದೆ ನಾಲ್ಕು ಗಂಟೆಗೆ ".ಗದ್ದೆಯಲ್ಲಿ ಕೆಲಸ ಮಾಡುತಿದ್ದ ಅಮ್ಮನಿಗೆ ನಾ ಹೇಳಿದೆ . ನಾನು ಆಗಿನ್ನು ಸಣ್ಣ ಹುಡುಗ SSLC  ಓದುತಿದ್ದೆ. ಅಣ್ಣ ಸೌದಿಯಲ್ಲಿ ಇದ್ದರು. ನನ್ನ ಹಳ್ಳಿಯಲ್ಲಿ ಫೋನ್ ಇದ್ದದ್ದು ನಾಲ್ಕೈದು ಮನೆಗಳಲ್ಲಿ ಅಷ್ಟೇ. ನನ್ನ ಮನೆಯಿಂದ ಸುಮಾರು ಅರ್ಧ ಕಿ.ಮೀ ದೂರದ ಶೆಟ್ಟರ ಮನೆಯಲ್ಲಿ ಒಂದು BSNL ಫೋನ್ ಇತ್ತು ಅಣ್ಣ ಶುಕ್ರವಾರ ರಜಾ ದಿವಸ ೪ ಗಂಟೆಗೆ ಫೋನ್ ಮಾಡುತಿದ್ದದು ಅಲ್ಲಿಗೆ. ಅಮ್ಮ ಎಷ್ಟೋ ಸಲ ಹೋಗಿ ಲೈನ್ ಸಿಗದೆ ನಿರಾಶೆಯಿಂದ ವಾಪಸ್ ಬಂದದ್ದು ಇದೆ. ಅಮ್ಮನ ಜೊತೆ ನಾನು ಹೋಗುತಿದ್ದೆ ಅಲ್ಲಿಗೆ ಯಾಕೆಂದರೆ ಆ ಕಾಲದಲ್ಲಿ t.v ಯು ಎಲ್ಲರ ಮನೆಯಲ್ಲಿ ಇರಲಿಲ್ಲ ಆದರೆ ಅಲ್ಲಿ ಇತ್ತು , ಬ್ಲಾಕ್ ಅಂಡ್ ವೈಟ್ ಟಿವಿ ಗೆ ಬಣ್ಣದ ಗಾಜು ಅಂಟಿಸಿದ್ದರು.  "ವಾವ್ ಕಲರ್ ಟಿವಿ".             

ಅಣ್ಣ ಮೊನ್ನೆ ಹೀಗೆ ಗೊಣಗುತ್ತಿದ್ದರು " ಎರೆಡೆರಡು ಫೋನ್ ಇದ್ದರು ಯಾರು ಫೋನ್ ಮಾಡುದಿಲ್ಲ , ನಾವು ಮಾಡಿದರು ನೋಡಿ ಸುಮ್ಮನಿರುತ್ತಾರೆ , ಮೊದಲೆಲ್ಲ ವಾರವಿಡಿ  ಕಾಯುತಿದ್ದರು.

                                                         *****************

ಈಗ ಫೋನ್ ಎಲ್ಲರ ಕೈಯಲ್ಲಿದೆ ಕಿಸೆಯಲ್ಲಿ ರಿಂಗ್ ಆಗುತಿದ್ದರು ಎಷ್ಟೋ ಜನಕ್ಕೆ ಕೇಳುದೇ ಇಲ್ಲ , ಕೆಲವರಂತೂ ನೋಡಿಯೂ ನೋಡದವರ ಹಾಗೆ ಜಾಣ ಕುರುಡುತನ ನಟಿಸುತ್ತಾರೆ . 
ತಂತ್ರಜ್ಞಾನದ ಜೊತೆಗೆ ನಾವು ಅಷ್ಟೊಂದು ಬದಲಾಗಿ ಬಿಟ್ಟೆವೆ , ಎಲ್ಲರನ್ನು ಒಟ್ಟಿಗೆ ಸೇರಿಸಬೇಕಾದ ಈ ತಂತ್ರಜ್ಞಾನಗಳು ನಮ್ಮ ನಮ್ಮ ಸಂಭಂದಗಳನ್ನು ಒಡೆಯುತಿದ್ದಾವೆಯೇ ?. ಕೆಲವೊಂದು ಜಗಳಗಳು ಶುರುವಾಗುದೆ ಕುಟುಂಬದವರ ವಾಟ್ಸಾಪ್ಪ್ ಗ್ರೂಪಿನಲ್ಲಿ. ಎಷ್ಟೋ ಸಲ ಈ ತಂತ್ರಜ್ನಾದ ಬಳಕೆಯನ್ನೇ ನಿಲ್ಲಿಸಿ ಬಿಡುವ ಅನ್ನಿಸುತ್ತದೆ. ಫೋನ್ ಮೆಸೇಜ್ ನಲ್ಲೇ ಶುರುವಾಗುವ ಕಲಹಗಳು ಎಷ್ಟೋ ಒಳ್ಳೆಯ ಸಂಬಂಧಗಳನ್ನು ಕೊನೆಗೊಳಿಸುತ್ತವೆ.
ಕೆಲವರಂತೂ ಎಷ್ಟು ಅಂಟಿಕೊಂಡಿದ್ದಾರೆ ಎಂದರೆ ಪಕ್ಕದ ರೂಮ್ನಲ್ಲೇ ಇರುವ ಗೆಳೆಯನನ್ನು ಊಟಕ್ಕೆ ವಾಟ್ಸಪ್ಪ್ ನಲ್ಲಿ ಕರೆಯುತ್ತಾರೆ.!!!.


ನಿಮಿಷಕ್ಕೆ ಒಂದು ರುಪಾಯಿಯ ನಾಣ್ಯ ಹಾಕಿ ಮಾತಾಡುತಿದ್ದ ಕಾಯಿನ್ ಫೋನ್ ಗಳು ಮ್ಯೂಸಿಯಂ ಸೇರಿದವು , ಯಾರದೇ ಫೋನ್ ಬರಲಿ ಯಾವುದೇ ತಾರತಮ್ಯ ಮಾಡದೆ ಒಂದೇ ರೀತಿ ರಿಂಗ್ ಆಗುತಿದ್ದ ಹಳೆಯ ಲ್ಯಾಂಡ್ ಲೈನ್ ಮೂಲೆ ಸೇರಿತು, ಇವುಗಳಲ್ಲಿ ಸಂಪರ್ಕ ಕಳೆದುಕೊಂಡವೆಷ್ಟೋ , ಪಡೆದುಕೊಂದವೆಷ್ಟೋ. ಹೀಗೆ ಯೋಚಿಸುತ್ತಿದ್ದೆ ಕಿಸೆಯಲ್ಲಿದ್ದ ಫೋನ್ ರಿಂಗಾಯಿತು , ಈ ನಂಬರ್ ನ ಎಲ್ಲೋ ನೋಡಿದ ನೆನಪು ,

"ಹಲೋ ... "

ಆ ಕಡೆಯಿಂದ ಹುಡುಗಿ ದ್ವನಿ,

"ಸರ್ ನಿಮಗೆ ಕ್ರೆಡಿಟ್ ಕಾರ್ಡ್ ಬೇಕಾ . . . . . . . . . . . . !!!!"

"ಬೇಡ ನನಗೆ ಒಂದು ರೂಪಾಯಿ ನಾಣ್ಯ ಬೇಕು " ಯಾಕೋ ಕೇಳಬೇಕೆಂದೆಣಿಸಿತು .

ಇಂತ ಪ್ರಶ್ನೆಗೆ ಕೋಪಗೊಳ್ಳುತಿದ್ದ ನನಗೆ ಯಾಕೋ ಆಗ ನನ್ನದೇ ಯೋಚನೆಗೆ ನಗು ಬಂತು, ಕಣ್ಮುಂದೆ ಹಳದಿ ಕಪ್ಪು ಬಣ್ಣದ ಕಾಯಿನ್ ಬಾಕ್ಸ್ ,ಕಿವಿಯಲ್ಲಿ ಐವತ್ತೇ ಸೆಕೆಂಡ್ ಆಗುತ್ತಿದ್ದಂತೆ  ಶುರುವಾಗುತಿದ್ದ ಕೀ, ಕೀ ಶಬ್ದ . ಎದೆ ಮೆಲ್ಲಗೆ ಬಡಿಯುತ್ತ , ಜಾಸ್ತಿ ಸದ್ದು ಮಾಡದೆ ಕೇಳುತಿದ್ದ, ಆಕಡೆಯಿಂದ ಬರುವ ,             

" ಹಲೋ. . . . . . . . . .  "





ಸುಕೇಶ್ ಪೂಜಾರಿ

Follow me on Facebook : https://www.facebook.com/sukesh.sush







Saturday, January 13, 2018

ಕಾಯಿನ್ ಬೂತ್ ನಲ್ಲಿ ಕಳೆದು ಹೋದ ಕಹಾನಿಗಳು ........ ...


ಕಾಯಿನ್ ಬೂತ್ ನಲ್ಲಿ ಕಳೆದು ಹೋದ ಕಹಾನಿಗಳು ........ ...





ಬರವಣಿಗೆ ಪ್ರಗತಿಯಲ್ಲಿದೆ . . . . . . . . .

ಸ್ವಲ್ಪ wait ಮಾಡಿ .

ಸುಕೇಶ್ ಪೂಜಾರಿ 

Wednesday, January 3, 2018

ಪೆನ್ನು-ಒಂದು ಉಡುಗೊರೆ

ಪೆನ್ನು ಕಿಸೆಯಲ್ಲಿ
ಕಕ್ಕಿಕೊಂಡದ್ದಕ್ಕೆ
ಅಮ್ಮನಿಂದ ನನಗೆ ಪೆಟ್ಟು
ನನಗೆ ಪೆನ್ನ ಮೇಲೆ ಸಿಟ್ಟು.

ಕಿಸೆಯ ಮೇಲೆ
ಕಿಸಕ್ಕನೆ ಚೆಲ್ಲಿದ್ದು
ನೀಲಿ ನಗೆ .
ಅದರಲ್ಲೂ ಹಲವು ಬಗೆ,
ಅಳಿಸಲು ಉಜ್ಜಿಕೊಂಡಷ್ಟು
ಆಳಕ್ಕಿಳಿಯುದು ಹೇಗೆ?
ನನ್ನ ಅಳು  ನಿಲ್ಲಿಸಲ್ಲು
ಅಮ್ಮ ಮಾಡುವ ಎಲ್ಲ ಪ್ರಯತ್ನಗಳ ಹಾಗೆ.

ಹಾಳೆ ಮೇಲೆ ಬರೆಯದ ಪೆನ್ನು
ನಾ ಬೆಂಚಿಗೆ ಉಜ್ಜಿದ್ದಕ್ಕೆ
ಸೇಡು ತೀರಿಸಿಕೊಂಡಿತೆ?
ಬಿಳಿಯ ಅಂಗಿ ತುಂಬ
ನೀಲಿ  ಚೆಲ್ಲಿ
ಪುಳಕಗೊಂಡಿತೆ?

ಮೇರಿ ನನ್ನ ಹುಟ್ಟುಹಬ್ಬಕ್ಕೆ ಕೊಟ್ಟದ್ದು
ಬರೆಯದಿದ್ದರೂ
ಕಿಸೆಯಲ್ಲಿತ್ತು.
ಅಂದ ಹಾಗೆ
ಪೆನ್ನಿಗೇನು ಗೊತ್ತು
ನನ್ನ ಪುಟ್ಟ ಜಗತ್ತು.

ಉಜ್ಜಿ ಒಗೆದು ಸುಸ್ತಾದ
ಅಮ್ಮನ ಕೋಪ
ಆ ಪೆನ್ನಿನ ಮೇಲೆ.
ಎತ್ತಿ ಬಿಸಾಕಿ,
ಜೊತೆಗೊಂದಷ್ಟು ಶಾಪ,
ಬಹುಶ ಮೇರಿಗೆ ಗೊತ್ತಾದರೆ
ನೊಂದುಕೊಂಡಾಳೇನೋ ಪಾಪ !!!




------------------------------------------------ಸುಕೇಶ್ ಪೂಜಾರಿ 

Thursday, December 28, 2017

ಒಂದೂರಿನ ಒಂಚೂರು ಕಥೆ -ಹಂಪಿ

ಯಾಕೋ ಎಲ್ಲಿಗಾದರು ಒಬ್ಬನೇ ಹೋಗಿ ಬರಬೇಕೆನಿಸಿತು.ನನ್ನೊಳಗಿನ ನನ್ನ ಹುಡುಕಲು. ಬದುಕಿಗೆ ಒಂದಷ್ಟು ಹೊತ್ತಿನ ಏಕಾಂತದ ಅವಶ್ಯಕತೆ ಇತ್ತು. ಒಂದಷ್ಟು ಬಟ್ಟೆಗಳನ್ನ  ಬ್ಯಾಗ್ ಗೆ ತುಂಬಿಸಿಕೊಂಡು  ರೈಲ್ ಹತ್ತಿದೆ.

ಈ ವಾರಾಂತ್ಯ ಒಬ್ಬನೆ ಹಂಪಿಗೆ ಹೋಗುತ್ತಿದ್ದೇನೆ ಎಂದಾಗ ಒಂದಷ್ಟು ಜನ ನಗುತ್ತಾ ಅಂದರು " ಅಲ್ಲೇನಿದೆ ? ಬರಿ ಕಲ್ಲು ,ವಿರೂಪಗೊಂಡ ವಿಗ್ರಹಗಳು,ಧ್ವಂಸಗೊಂಡ ದೇವಾಲಯಗಳು. ಈ ಬಿಸಿಲಿಗೆ ಅಲ್ಲಿ ಹೋಗಿ ಏನು  ಮಾಡುವೆ ?". ನನಗೆ ನನ್ನದೇ ಆದ ಕಾರಣಗಳಿದ್ದವು , ಪ್ರತೀ ದಿನ ,ಪ್ರತೀ ವಾರ ಅದೇ ಜನ ಮತ್ತದೇ ಜಾಗ, ಟ್ರಾಫಿಕ್ ನೋಡಿ ಬೇಸತ್ತ ನನಗೆ ಎಂದು ಕಾಣದ ಒಂದು ಊರು , ಎಂದು ಮಾತಾಡದ ಜನಗಳು ಅಲ್ಲಿನ ಇತಿಹಾಸ ಪರಂಪರೆ ನೋಡಬೇಕಿತ್ತುಅದೂ ಅಲ್ಲದೆ ನನ್ನದೊಂದು ಸ್ವಾರ್ಥ ಬೇರೆ ಇತ್ತು "ಎಲ್ಲ ಎಲ್ಲೆಗಳ ಮೀರಿ , ನನ್ನೊಳಗೆ ನಾನಾಗಿ ನನ್ನನ್ನೇ ಹುಡುಕುವ ಪ್ರಯತ್ನ ಅದಾಗಿತ್ತು " ಎನ್ನನ್ನೇ ಹುಡುಕುವ ಮೊದಲು ನೀವು ಏನನ್ನು ಕಳೆದುಕೊಂಡಿರುದು ಅನ್ನುವ ಅರಿವು ನಮಗೆ ಬೇಕು. ಹೌದು ಆ ಅರಿವು ನನಗಿತ್ತು ಅದಕ್ಕಾಗಿಯೇ ಈ ಪ್ರಯತ್ನ. 

ರೈಲು ಸರಿಯಾದ ಸಮಯಕ್ಕೆ ಬಂದು ನನ್ನನ್ನೇ ಕಾಯುತಿತ್ತು,ಮೊದಲೇ ಕಾಯ್ದಿರಿಸಿದ ಸೀಟ್ ನನ್ನ ಬರುವಿಕೆಯ ನಿರೀಕ್ಷೆಯಲ್ಲಿತ್ತು.ನನ್ನ ಹಾಗೆ ಇನ್ನೂ ಹಲವರು ಹಂಪಿ ನೋಡುವ ಹಂಬಲದಿಂದ ಅದೇ ರೈಲು ಹತ್ತಿದ್ದರು. 

ರೈಲು ಜೋರಾಗಿ ಒಮ್ಮೆ ಹಾರ್ನ್ ಮಾಡಿ ರೈಲು ನಿಲ್ದಾಣಕ್ಕೆ ವಿದಾಯ ಹೇಳಿ ಹೊರಟಿತ್ತು. ನಾ ನಿದ್ದೆಗೆ ಜಾರಿದ್ದೆ. 

ಸೂರ್ಯ ತನ್ನ ಮೊದಲ ಬಂಗಾರದ ಬಣ್ಣದ ಕಿರಣಗಳ ಬಿಡುತ್ತಾ ಬೆಟ್ಟದಾಚೆಯಿಂದ ಎದ್ದು ಬರುತಿದ್ದ,ಮತ್ತೊಂದು ಹೊಸ ಬೆಳಗು ಹೊಸ ಊರಿನಲ್ಲಿ. ಹೊಸಪೇಟೆಯಲ್ಲಿ ರೈಲಿನಿಂದ ಇಳಿದು ಹಂಪಿಗೆ ಹೋಗಲು ಬಸ್ ಹಿಡಿಯಬೇಕಿತ್ತು (ಹೊಸಪೇಟೆಯಿಂದ ಸುಮಾರು ೧೮ ಕಿ.ಮೀ ). ಒಂದಷ್ಟು ಜನರ ಗುಂಪು ಬಸ್ ನಿಲ್ದಾಣದ ಕಡೆಗೆ ಚಲಿಸುತ್ತಿತ್ತು ನಾನು ಅವರನ್ನು ಸೇರಿಕೊಂಡೆ. ಅದರಲ್ಲೊಬ್ಬರು ಮಾತಿಗೆ ಇಳಿದರು " ಯಾವ ಊರು ? ಹೆಸರೇನು ಎಂದು ?" ನಾನು ನನ್ನ ವಿವರ ಹೇಳಿದೆ ಮತ್ತು ಅವರನ್ನು ಕೇಳಿದೆ . ಅವರ ಹೆಸರು "ಜ್ವಾಲಾ" ಬೆಂಗಳೂರಿನವರೆ ಅವರು ಹಂಪಿಗೆ   ಒಬ್ಬರೇ ಬಂದಿದ್ದರು ನನ್ನ ಹಾಗೆ " ನೀವು ಕೂಡ ಒಬ್ಬರೇ ಅಲ್ವ ಬನ್ನಿ ಜೊತೆಗೆ ನೋಡೋಣ " ಅಂದರು . ನನಗೇ ಯಾಕೋ ಒಬ್ಬನೇ ಸುತ್ತ ಬೇಕು ಅಂದರೆ ಇವರೇಕೆ ಗಂಟು ಬಿದ್ದರು ಅನಿಸಿತು ಆದರೆ ಯಾಕೋ ನಿರಾಕರಿಸುವ ಮನಸಾಗಲಿಲ್ಲ. ವಯಸ್ಸಿನಲ್ಲಿ ಹಿರಿಯರು ,ನನಗೊ ಹೊಸ ಊರು ,ಜನ ಹಾಗಾಗಿ ಜೊತೆಗಿರಲಿ ಅಂದುಕೊಂಡೆ ಇನ್ನುಳಿದ ಅವರ ಕಥೆ ಕೊನೆಗೆ ಹೇಳುತ್ತೇನೆ. 

ಅದೊ,ಇದೂ ಮಾತಾಡುತ್ತ , ಬಸ್ಸಿನಲ್ಲಿದ್ದ ಒಬ್ಬ ಅದೇ ಊರಿನ ಹಿರಿಯರ ಉಚಿತ ಉಪದೇಶ ಕೇಳುತ್ತ ( ಆ ಉಪದೇಶದ ಬಗ್ಗೆ ಬರೆದರೆ ಅದೇ ಒಂದು ಲೇಖನ ಆಗ ಬಹುದು!!!) ಹಂಪಿ ತಲುಪಿದ್ದೆ. ಒಂದಿಷ್ಟು ಉಪಹಾರ ಮಾಡಿ ಹಂಪಿಯ ಪ್ರಸಿದ್ಧ ತಾಣಗಳ ಕಣ್ತುಂಬಿಸಿ ಕೊಳ್ಳುತಿದ್ದೆ. 

ಹಂಪಿಯ ಇತಿಹಾಸ ಹೇಳುದು ನನ್ನ ಈ ಲೇಖನದ ಉದ್ದೇಶವಲ್ಲದಿದ್ದರು , ಒಂದಿಷ್ಟು ಮಾಹಿತಿ ನೀಡದಿದ್ದರೆ ತಪ್ಪಾದಿತೇನೋ. ಹಂಪಿ ಕರ್ನಾಟಕದ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿದೆ, ಇದು ವಿಶ್ವ ಪಾರಂಪರಿಕ ಕ್ಷೇತ್ರವೆಂದು ಮನ್ನಣೆ ಪಡೆದಿದೆ . ಹಂಪಿ ವಿಜಯನಗರ ಸಾಮ್ರಾಜ್ಯದ ರಾಜಧಾನಿ. ಹಕ್ಕ-ಬುಕ್ಕ ರಿಂದ ಕಟ್ಟಲ್ಪಟ್ಟು ಕೃಷ್ಣದೇವರಾಯ ನಿಂದ ಸಂಭ್ರದ್ದಿಹೊಂದಿ ಬಹಮನಿ ಸುಲ್ತಾನರಿಂದ ಕೊಳ್ಳೆ ಹೊಡೆಯಲ್ಪಟ್ಟ ಸಂಸ್ಥಾನ . ಹಂಪಿಯು ತುಂಗಾಭದ್ರಾ ನದಿಯ ದಂಡೆಯ ಮೇಲೆ ಇದೆ , ಸುತ್ತಲು ಕಲ್ಲು ಬಂಡೆಗಳ ಬೆಟ್ಟಗಳಿಂದ ಸುತ್ತುವರಿದಿದೆ. ಕೆಲವೊಂದು ಮಾಹಿತಿ ಪ್ರಕಾರ ಇದು ರಾಮಾಯಣ ಕಾಲದ ಪಂಪಾ ಕ್ಷೇತ್ರವಾಗಿತ್ತು, ವಾಲಿಯ ಸಾಮ್ರಾಜ್ಯವಾಗಿತ್ತು ಅನ್ನುವ ಪ್ರತೀತಿ ಇದೆ ಇದಕ್ಕೆ ಪೂರಕವಾಗಿ ನದಿಯ ಆ ಬದಿಗೆ  ಅಂದರೆ ಆನೆಗುಂಡಿ ಎಂಬ ಊರಿನಲ್ಲಿ ವಾಲಿಬೆಟ್ಟ, ಅಂಜನಾದ್ರಿ ಬೆಟ್ಟ( ಹನುಮಂತನ ಜನ್ಮಸ್ಥಳ), ಪಂಪ ಸರೋವರ, ಶಬರಿ ರಾಮನಿಗೆ ಕಾದ ಸ್ಥಳ,ಚಿಂತಾಮಣಿ (ರಾವಣ ಸೀತೆಯನ್ನು ಅಪಹರಿಸಿದ ಸುದ್ದಿ ಕೇಳಿ ಚಿಂತೆಯಿಂದ ರಾಮ ಕೂತ ಸ್ಥಳ ) ಹಾಗು ವಾಲೀ- ಸುಗ್ರೀವರು ಯುದ್ಧಮಾಡುವಾಗ ರಾಮ ಮರೆಯಿಂದ ನಿಂತು ಬಾಣ ಬಿಟ್ಟ ಪ್ರದೇಶಗಳಿವೆ, ಹಾಗೆ ಹಂಪಿಯ ಹಲವಾರು ಕೆತ್ತನೆಗಳಲ್ಲಿ ರಾಮಾಯಣದ ಚಿತ್ರಣಗಳನ್ನು ಕಾಣ ಬಹುದು. 

ಬಹಮನಿ ಸುಲ್ತಾನರಿಂದ ಲೂಟಿಯಾಗುವ ಮೊದಲು ಹಂಪಿ ಬಹಳ ಸಂಪತ್ತು ಭರಿತವಾಗಿತ್ತು ಎನ್ನುವ ಉಲ್ಲೇಖಗಳಿವೆ . ಹಂಪಿಯನ್ನು ಆಳಿದ ಪ್ರಸಿದ್ಧ ರಾಜರುಗಳಾದ ಹರಿಹರ , ಹಕ್ಕ-ಬುಕ್ಕರು , ಕೃಷ್ಣದೇವರಾಯ ಮೊದಲಾದವರು ಕಲೆ, ಶಿಲ್ಪಕಲೆ , ಪ್ರಜಾಕ್ಷೇಮ ಕೃಷಿ , ನೀರಾವರಿ , ಕೋಟೆ ದೇವಾಲಯಗಳ ಅಭಿವೃದ್ಧಿಗೆ ಶ್ರಮಿಸಿರುದು ಕಂಡು ಬರುತ್ತದೆ, ಅದಕ್ಕೆ ಸಾಕ್ಷಿಯಾಗಿ ಅಳಿದುಳಿದ ದೇವಾಲಯಗಳು , ವಿರೂಪಗೊಂಡ ವಿಗ್ರಹಗಳು , ಪಾಳುಬಿದ್ದ ಸಂತೆಯ ಕಲ್ಲುಗಳು ಇತಿಹಾಸ ಹೇಳುತ್ತಾ ನಿಂತಿವೆ . 

ಹಂಪಿಯ ಪ್ರಮುಖ ದೇವಾಲಯವಾದ  ವಿರೂಪಕ್ಷ ದೇವಸ್ಥಾನದಲ್ಲಿ ಈಗಲೂ ದಿನ ನಿತ್ಯ ಪೂಜೆ ನಡೆಯುತ್ತಿದೆ. ಊರ ಜನರೆಲ್ಲ ಸೇರಿ ಪ್ರತೀ ವರ್ಷ ಜಾತ್ರೆ ನಡೆಸುತ್ತಾರೆ. ಇಲ್ಲಿಯ ಇತರ  ಪ್ರಮುಖ ದೇವಾಲಯಗಳಾದ ಸಾಸಿವೆ ಕಾಳು ಗಣಪತಿ,ಕಡಲೆ ಕಾಳು ಗಣಪತಿ , ಶ್ರೀ ಕೃಷ್ಣ ದೇವಾಲಯ,ಉಗ್ರ ನರಸಿಂಹ ದೇವಾಲಯ ಭೂಮಿಯೊಳಗೆ ಕಟ್ಟಲ್ಪಟ್ಟ ಶಿವ ದೇವಾಲಯಗಳಳ್ಳಿ ಯಾವುದೇ ಪೂಜೆ ನಡೆಯುತ್ತಿಲ್ಲ (ಕೆಲವೊಂದರಲ್ಲಿ ವಿಗ್ರಹಗಳೇ ಇಲ್ಲ ಮತ್ತು ಅಳಿದುಳಿದ ಕೆಲವು ವಿಗ್ರಹಗಳು ವಸ್ತು ಸಂಗ್ರಾಲಯದಲ್ಲಿದೆ). 

ಹಂಪಿಯ ಕೆಲವು ಆಕರ್ಷಣೀಯ ಸ್ಥಳಗಳು :

ವಿರೂಪಾಕ್ಷ ದೇವಾಲಯ 
ಹೇಮಕೂಟ 

ಶಿಥಿಲಾವಸ್ಥೆಯಲ್ಲಿರುವ ಸೂಳೆ ಬಜಾರ್ 

ಲಕ್ಷ್ಮಿ ಮತ್ತು ತನ್ನ ಸ್ವಂತ ಕೈಗಳನ್ನು ಕಳೆದುಕೊಂಡಿರುವ ಉಗ್ರ ನರಸಿಂಹ 
ಭೂಮಿಯೊಳಗೆ ಕಟ್ಟಿರುವ ಶಿವ ದೇವಾಲಯ (ಪಾತಾಳೇಶ್ವರ ದೇವಾಲಯ)

ಲೋಟಸ್ ಮಹಲ್ 


ಲೋಟಸ್ ಮಹಲ್ 


ಆನೆಗಳನ್ನು ಕಟ್ಟಿಡುತಿದ್ದ ಸ್ಥಳ 


ರಂಗನಾಥ ದೇವಾಲಯ 

ಮಹಾನವಮಿ ದಿಬ್ಬ 


ಅಳಿದುಳಿದ ಅವಶೇಷಗಳು 


ವಿಠ್ಠಲ ದೇವಾಲಯ 

ಹಜಾರ ರಾಮ ದೇವಾಲಯದ ಹೊರ ಗೋಡೆಯಲ್ಲಿನ ಕೆತ್ತನೆಗಳು 

ಹಜಾರ ರಾಮ ದೇವಾಲಯ


ರಾಣಿಯ ಸ್ನಾನ ಗ್ರಹ 


ರಾಣಿಯ ಸ್ನಾನ ಗ್ರಹ (ಒಳಾಂಗಣ)



ವಿಶ್ವ ಪ್ರಸಿಧ್ಧ ಕಲ್ಲಿನ ರಥ 



ಅಂಜನಾ ಪರ್ವತ ಹನುಮಂತನ ಜನ್ಮಸ್ಥಳ 


ಚಿಂತಾಮಣಿ 


ತುಂಗಾ-ಭದ್ರ ಆಣೆಕಟ್ಟು 


ಅಂಜನಾ ಪರ್ವತದಿಂದ ಸೂರ್ಯಾಸ್ತಮಾನದ ದೃಶ್ಯ 


ಅಂಜನಾ ಪರ್ವತದಿಂದ ಹಂಪಿಯ ನೋಟ 


ಅಂಜನಾ ಪರ್ವತದಿಂದ ಹಂಪಿಯ ನೋಟ


ಅಂಜನಾ ಪರ್ವತದಿಂದ ಹಂಪಿಯ ನೋಟ


ಹಂಪಿಯಲ್ಲಿ ಬರಿ ಇಷ್ಟೇ ಅಲ್ಲ ಹಲವಾರು ಸ್ಥಳಗಳಿವೆ. ಸಾಸಿವೆ ಕಾಳು , ಕಡಲೆ ಕಾಳು ಗಣಪತಿ , ಮತಾಂಗ ಪರ್ವತ , ಋಷಿಮುಖ ಪರ್ವತ , ಪಂಪಾ ಸರೋವರ ಮತ್ತು  ಕೃಷ್ಣ ದೇವಾಲಯ ಇನಿತರ ಪ್ರಮುಖವು . 


ಎರಡು ದಿನ ಹಂಪಿಯೆಲ್ಲ ಸುತ್ತಾಡಿ ಕೊನೆಗೆ ಬಂದು ಅಂಜನಾ ಪರ್ವತದ ೫೭೫ ಮೆಟ್ಟಿಲುಗಳನ್ನು ಹತ್ತಿ ಮೇಲೆ ಬಂದು ಕೂತೆ , ನನಗೊಮ್ಮೆ ಪೂರ್ತಿ ಹಂಪಿಯನ್ನು ಒಟ್ಟಿಗೆ ನೋಡಬೇಕಿತ್ತು . ಕಣ್ಣು ಮುಚ್ಚಿಕೊಂಡು ಒಂದುಕ್ಷಣ ಯೋಚಿಸಿದೆ "ಈಗಲೇ ಹಂಪಿ ಹೀಗೆ ಇದೆ ಇನ್ನು ನೂರಾರು ವರುಷಗಳ ಹಿಂದೆ ಎಲ್ಲ ವೈಭವಗಳ ತುಂಬಿಕೊಂಡಾಗ ಹೇಗಿರಬಹುದಿತ್ತು ?" ಯಾಕೋ ತುಂಬಾ late ಆಗಿ ಹುಟ್ಟಿದೆ ಅನಿಸಿದ್ದು ಸುಳ್ಳಲ್ಲ.ಸೂರ್ಯ ಮೆಲ್ಲನೆ  ಅಂಜನಾ ಪರ್ವತ ಇಳಿಯುತ್ತಿದ್ದ , ಅಂದು ಹಂಪಿ ಲೂಟಿಯಾದಾಗ ಬಹುಶ ಸೂರ್ಯ ನೋಡಲಾಗದೆ ಬಹುಶ ಬೇಗನೆ ಮುಳುಗಿರಬೇಕು ಅಂದುಕೊಂಡೆ.

ಒಂದು ಸಾಮ್ರಾಜ್ಯ ಪತನವಾಗಿ ಅದು ಹೇಗೆ ಬರಿಯ ಇತಿಹಾಸವಾಗುತ್ತದೆ ಎಂಬುದ ತಿಳಿಯಬೇಕಾದರೆ ಹಂಪಿ ನೋಡಬೇಕು . ಹಂಪಿ ಎಲ್ಲ ಇದ್ದು ಎಲ್ಲವನ್ನು ಕಳೆದುಕೊಂಡ ನತದೃಷ್ಟ ಸಾಮ್ರಾಜ್ಯ. ಸದ್ಯಕ್ಕೆ ಹಂಪಿಯ ಮಟ್ಟಿಗೆ ಹೇಳಬೇಕಾದರೆ , ಸರಕಾರ ಸ್ವಲ್ಪ ಕಾಳಜಿವಹಿಸಿಕೊಂಡು ಅಳಿದುಳಿದ ಅವಶೇಷಗಳನ್ನು ರಕ್ಷಿಸುವ ಕೆಲಸಮಾಡಿದೆ . ಹಲವಾರು ಭಗ್ನಗೊಂಡ ಮೂರ್ತಿಗಳು, ಇನ್ನಿತರ ಇತಿಹಾಸದ ಪುರಾವೆಗಳನ್ನು  ವಸ್ತು ಸಂಗ್ರಹಾಲಯದಲ್ಲಿ ಇಟ್ಟು ಕಾಪಾಡಲಾಗಿದೆ. ಸ್ವಚ್ಛತೆ ಹಂಪಿಯನ್ನು ಕಾಡುತ್ತಿದೆ , ಪ್ರವಾಸಿಗರಿಗೆ ಸೂಕ್ತವಾದ ಅನುಕೂಲಗಳನ್ನು ಕಲ್ಪಿಸಿಕೊಡಬೇಕಾಗಿದೆ . ಪಾಳುಬಿದ್ದ ಕೆಲವೊಂದು ಸಣ್ಣ ಪುಟ್ಟ ಕಲ್ಲಿನ ಮಂಟಪಗಳನ್ನು ಅಂದಗೊಳಿಸಿ ಮುಂದಿನ ಪೀಳಿಗೆಗೆ ಕಾಪಾಡಬೇಕಿದೆ. 

"ಕಲೆ ಶಿಲ್ಪಕಲೆ , ಸಾಹಿತ್ಯ ಇನ್ನಿತರ ಸಂಸ್ಕೃತಿಗಳ ಹೊಂದಿರುವ ಶ್ರೀಮಂತ ದೇಶ ನಮ್ಮದು , ಅದನ್ನೆಲ್ಲ ಸರಿಯಾಗಿ ಕಾಪಾಡಲಾಗದ ಬಡವರು ನಾವು."

ಪಾಳುಬಿದ್ದದು, ಶಿಥಿಲವಾದದ್ದು ಹಂಪಿಯಲ್ಲ , ನಮ್ಮ ಮನಸ್ಸು.ನಮ್ಮದೇ ಇತಿಹಾಸದ ಕಡೆ ನಾವು ನೋಡುವ ದೃಷ್ಟಿಕೋನ. ಕೆಲವರಂತು ಅಮರ ಶಿಲ್ಪಿಗಳು (ಅಮರ ಪ್ರೇಮಿಗಳು ) ಅಲ್ಲಲ್ಲಿ ಗೋಡೆಗಳಲ್ಲಿ ತಮ್ಮ ಜಂಟಿ ಹೆಸರುಗಳನ್ನು ಕೆತ್ತಿದ್ದಾರೆ, ತಮ್ಮ ಕೈಯಲ್ಲಿ ಆಗೂದಿಷ್ಟೇ ಎಂಬುದನ್ನು ಸಾಬೀತು ಪಡಿಸಲು !!. 

ಹಂಪಿಯಿಂದ ಆನೆಗುಂದಿಗೆ ಬಸ್ ಹತ್ತಿದ್ದೆ . ಯಾರೋ ಜೊತೆಗೆ ತಂದ ಮೂಟೆಯನ್ನು ಬಸ್ ಒಳಗೆ ಹಾಕಲು ಹೆಣಗಾಡುತಿದ್ದರು " ರೀ ನಿಮಗೆ ಆಗಲ್ಲ ಬಿಡಿ , ಈ ಕಡೆ ಕೊಡಿ ನಾನೇ ಎತ್ತಿ ಮೇಲೆ ಹಾಕುತ್ತೇನೆ " ಎಂದು ಇನ್ನೊಬ್ಬರು ಸಹಾಯ ಹಸ್ತ ಚಾಚಿದರು , ಅದಕ್ಕೆ ಆ ಹಿರಿಯ ಮಹಾನುಭಾವರು ಒಂದು ಮಾತು ಹೇಳಿದರು " ಎಂತೆಂತ ಬಂಡೆ ಕಲ್ಲುಗಳ ಕೆತ್ತಿ ಅಷ್ಟೆಲ್ಲ ಎತ್ತರಗಳಲ್ಲಿ ಯಾವುದೇ ಯಂತ್ರಗಳ ಸಹಾಯವಿಲ್ಲದೆ ನಮ್ಮ ಹಿರಿಯರೆಲ್ಲ ಎತ್ತಿ ಇಟ್ಟಿದ್ದಾರೆ , ಇದೆಲ್ಲ ಯಾವ ಮಹಾ ". ಅವರ ಆ ಮಾತುಗಳಲ್ಲಿ ಒಂದು ಅಭಿಮಾನವಿತ್ತು, ನಮ್ಮ ಪೂರ್ವಜರ ಕೌಶಲ್ಯದ ಬಗ್ಗೆ ಹೆಮ್ಮೆ ಇತ್ತು. ನಮಗೆ ಈಗ ಬೇಕಾಗಿರುದು ಅದೇ . ವಾಟ್ಸಪ್ಪ್ , ಫೇಸ್ಬುಕ್ ಮತ್ತಿತರ ಸಾಮಾಜಿಕ ಜಾಲತಾಣಗಲ್ಲಿ ಬಂದಿಯಾದ ನಮಗೆ ಮತ್ತೆ ಇಂತಹ ಅಭೂತಪೂರ್ವ ಇತಿಹಾಸ ನಿರ್ಮಿಸಲು ಸಮಯವೆಲ್ಲಿದೆ !!!?

ಕೆಲವರಂತು ಕೇಳಿದರು ಒಬ್ಬನೆ ತಿರುಗಾಡಿ ಏನು ಮಾಡಿದೆ?. ನಾನೆಲ್ಲಿ ಒಂಟಿಯಾಗಿದ್ದೆ ? ಎರಡು ದಿನದಲ್ಲಿ ನನಗೆ ಹಾಗೆ ಎಂದು ಅನ್ನಿಸಲೇ ಇಲ್ಲ. ಯಾರದೋ ಪುಟ್ಟ ಮಗು (ಬೀದಿ ಬದಿಯ ಕೆಲಸ ಮಾಡುವ ) ನನ್ನ ಕನ್ನಡಕ ಹಾಕಿಸಿಕೊಂಡು ನನ್ನ ಜೊತೆ ಫೋಟೋ ತೆಗೆಸಿಕೊಂಡಿತು. ಅದಕ್ಕೆ ಆ ಫೋಟೋ ತೋರಿಸಿದಾಗ ಅದರ ಮುಖದಲ್ಲಿನ ಆ ನಗು ಬಹುಶ ಬೇರೆಲ್ಲೋ ಸಿಗುದು ಕಷ್ಟ . ಯಾರೋ ಬೀದಿಯ ಮಕ್ಕಳ ಜೊತೆ ಕೂತು ಒಂದಷ್ಟು ತಿಂಡಿ ತಿಂದೆ. ಆಟೋ ಚಾಲಕನೊಬ್ಬ " ಸರ್ ಅಲ್ಲಿ ಹೋಗಿ , ಇಲ್ಲಿಂದ ಅಲ್ಲಿ ಹೋಗಿ " ಎನ್ನುತ್ತಾ ಹೋದಲ್ಲೆಲ್ಲ ಸಿಗುತ್ತಾ ದಾರಿ ಹೇಳುತಿದ್ದ . ಊರ ಯಾರೋ ಹಿರಿಯರೊಬ್ಬರು ಚಿಂತಾಮಣಿಯ ಕಥೆ ಹೇಳಿದ್ದರು , ಹೀಗೆ ಪಟ್ಟಿ ದೊಡ್ಡದಿದೆ. ಇದಕ್ಕಿಂತ ಮಿಗಿಲಾಗಿ ಹಂಪಿಯ ಒಂದೊಂದು ಕಲ್ಲು ಇತಿಹಾಸದ ವೈಭವ, ಕ್ರೌರ್ಯ ಹೇಳುತಿತ್ತು. 

 "ಜ್ವಾಲಾ"

ಸುಮಾರು ೬೦ ಆಸುಪಾಸಿನೊಳಗಿನ ಹಿರಿಯ ವ್ಯಕ್ತಿ, "ಅಂಕಲ್ ನೀವು  ಹೇಗೆ ಹಂಪಿಗೆ ಬಂದದ್ದು?". ದಿನವಿಡೀ ಒಟ್ಟಿಗೆ ಸುತ್ತಾಡಿ ಒಂದು ಆತ್ಮೀಯತೆ ಮೂಡಿತ್ತು ಕುತೂಹಲದಿಂದ ಕೇಳಿದೆ . ನನ್ನ ಕುತೂಹಲಕ್ಕೆ ಕಾರಣವಿತ್ತು, ಅಂಕಲ್ ಕೈಯಲ್ಲಿ ಯಾವುದೇ ಬ್ಯಾಗ್ ಇರಲಿಲ್ಲ ಹಂಪಿಗೆಂದೇ ಬಂದವರಲ್ಲ .ಕೈಯಲ್ಲೊಂದು ಪ್ಲಾಸ್ಟಿಕ್ ಚೀಲ ಅದರಲ್ಲಿ ಕೆಲವು ಕಾಗದ ಪಾತ್ರಗಳು ಜೊತೆಗೊಂದು ಲುಂಗಿ ಇಷ್ಟೇ ಇದ್ದದ್ದು . "ನಾನು ಬೇರೆ ಎಲ್ಲೋ ಹೋಗಬೇಕಿತ್ತು" ಬೆಂಗಳೂರಿಂದ ಅಲ್ಲೇ ಸುಮಾರು ೮೦ ಕಿ.ಮೀ ಒಳಗೆ ರೈಲ್ ತಪ್ಪಿ ಹೊಯುತು ಏನು ಮಾಡಲಿ ಎಂದು ಹಾಗೇ ನಿಲ್ದಾಣದಲ್ಲಿ ಕೂತಿದ್ದೆ , ಹಂಪಿಗೆ ಹೋಗುವ ರೈಲುಗಾಡಿ ಬಂತು ಟಿಕೆಟ್ ತೆಗೆದುಕೊಂಡು ಹತ್ತಿ ಕೂತೆ . ನನಗೊ ಒಮ್ಮೆ ಹಂಪಿ ನೋಡಬೇಕಿತ್ತು  ಹಾಗೆ ಬಂದೆ . ಬೆಳಗ್ಗೆ ಮನೆಗೆ ಫೋನ್ ಮಾಡಿ ನಾನು ಹಂಪಿಯಲ್ಲಿದ್ದೇನೆ ಫೋನ್ ನಲ್ಲಿ ಚಾರ್ಜ್ ಇಲ್ಲ ಸಂಜೆ ವಾಪಾಸ್ ಬರುತ್ತೇನೆ ಎಂದು ಹೇಳಿ ಫೋನ್ ಸ್ವಿಚ್ ಆಫ್ ಮಾಡಿ ಒಂದು ದಿನವಿಡಿ ನನ್ನ ಜೊತೆಗಿದ್ದರು.  

ವಿಧಿ ಯಾರನ್ನು ಎಲ್ಲಿ ಎಲ್ಲಿ ಜೊತೆಯಾಗಿಸುತ್ತದೆ. ಪಯಾಣದ ನಡುವೆ ಯಾರೋ ಸಿಕ್ಕವರು ಅದೆಷ್ಟು ಆತ್ಮೀಯರಾಗಿ ಬಿಡುತ್ತಾರೆ. ಮೊನ್ನೆ ಹಂಪಿಯಿಂದ ಬಂದ ಮೇಲೆ ಕೆಲವು ದಿನದ ನಂತರ ಫೋನ್ ಮಾಡಿದೆ ಯೋಗಕ್ಷೇಮ ಕೇಳಲು . ಅವರ ಪ್ರೀತಿ ಅಭಿಮಾನ ಮರೆಯುದು ಕಷ್ಟ. 

"ನಾನೇಕೆ ಹಂಪಿಗೆ ಹೋದೆ ?"

ಕೆಲವು ತಿಂಗಳ ಹಿಂದೆ ನಾ ಯಾವುದೋ ಬೆಟ್ಟ , ಅಳಿದುಳಿದ ಕಲ್ಲಿನ ಕೆತ್ತನೆಗಳ ಅವಶೇಷಗಳ ನೋಡುತ್ತಾ ಅಳೆಯುತ್ತಿದ್ದೆ . ಅದು ಕನಸು ಒಂದಿಷ್ಟೇ ನೆನಪಿತ್ತು. ಬೆಳಗ್ಗೆ ಎದ್ದಾಗ ಆ ತರದ ಜಾಗಕ್ಕೆ ಹೋಗಬೇಕೆನಿಸಿತು . ಬಹುಶ ಕನಸು ಪೂರೈಸಿಕೊಳ್ಳಲು ಹಂಪಿಗಿಂತ ಒಳ್ಳೆಯ ಜಾಗ ಸಿಗುದು ಕಷ್ಟ.!!!. 


"ಹಂಪಿ ಆಯಿತು ಮುಂದೆ....... ?"

ಕನ್ಯಾಕುಮಾರಿ ಕರೆಯುತ್ತಿದ್ದಾಳೆ, ಹೋಗಿ ಬಂದು ಮತ್ತೆ ಬರೆಯುತ್ತೇನೆ. 

ಧನ್ಯಾವಾದಗಳೊಂದಿಗೆ 

ಸುಕೇಶ್ ಪೂಜಾರಿ 













Saturday, November 4, 2017

ಎರಡು ನೆರಳು

ನಾನು ನಾನಾಗದಿರುವಾಗ 
ನನ್ನೊಳಗೆ ನಾನ್ಯಾರು ?
ಪ್ರಶ್ನೆಗಳ ವರ್ತುಲ 
ಉತ್ತರದ ಕೈಚೀಲ 
ತಡಕಾಡಿದಸ್ಟು 
ಮುಗಿಯದ ಗೊಂದಲ. 

ಸುಮ್ಮನೆ ಕುಳಿತು 
ನನ್ನ ಹಿಂದೆ ನಾನೇ ಅವಿತು 
ಆಡಿಕೊಂಡ ಆಟ 
ಕಣ್ಣಾಮುಚ್ಚಾಲೆಯಂತೂ ಅಲ್ಲ,
ಬಣ್ಣದ ಮುಖವಾಡ 
ಮಾಸಿಹೋಗಬಹುದೆಂಬ 
ಭಯಕ್ಕೆ 
ಬೆದರಿ,ಬೆವರಿ ಒಂದಷ್ಟು 
ನಾ ಕಂಡರೆ, ಕ್ಷಮಿಸಿ 
ನಾ ಅವನಲ್ಲ. 

ಕುಣಿಕೆಯ ಕೊನೆಗೆ 
ನಾ ಅಲ್ಲದ ನನ್ನ 
ನೇತಾಡಿಸಿ,ನರಳಿಸಿ 
ಮುಗಿಸಿಬಿಟ್ಟರೆ?
ನೀವು ಪರಿಚಯದ 
ನಗೆ ಬೀರುದು ಹೇಗೆ?
ನನ್ನ ಬಿಟ್ಟ ನಾನು 
ನಿಮಗೆ ಅಪರಿಚಿತ 
ನನಗಷ್ಟೇ ಚಿರಪರಿಚಿತ. 

ಒಂದು ದಿನ ನೀವು,
ಹಠ ಹಿಡಿದು 
ನನ್ನೊಳಗಿನ ನನ್ನ 
ಹುಡುಕ ಹೊರಟರೆ?
ನಾನಲ್ಲದ ನನ್ನ 
ನಾನೇ ಆವರಿಸಿ,
ನಿಮ್ಮನ್ನೆಲ್ಲ ಯಾಮಾರಿಸಿ 
ಸದ್ದೇ ಮಾಡದೆ ಎದ್ದು ಹೋಗುವೆ. 
ಆಗ ನೀವು,
ನಿಮ್ಮೊಳಗಿನ ನಿಮ್ಮ ಹುಡುಕಿಕೊಳ್ಳಿ. 

ನಾನು ನಾನಾಗಿರುವಾಗ 
ನನ್ನೊಳಗೆ ಮತ್ತೆ ನೀನ್ಯಾರು?. 
ನನಗೆ ಎರಡು ನೆರಳು 
ಒಂದು ನನ್ನದು,
ಇನ್ನೊಂದು ನನ್ನದೇ.!!
ಪ್ರಶ್ನೆಗಳಿಗುತ್ತರ 
ಲೀಲಾಜಾಲ,
ಎಲ್ಲ ನನ್ನೊಳಗಿನ ನನ್ನ 
ಮಾಯಾಜಾಲ. 

------------------------------------------------------------------ಸುಕೇಶ್ ಪೂಜಾರಿ 
 

Saturday, October 28, 2017

ಚುಟುಕುಗಳು- ಕನ್ನಡ ರಾಜ್ಯೋತ್ಸವಕ್ಕೆ

                   ೧

ಬೆಂಗಳೂರಿನಲ್ಲಿ ಕನ್ನಡ 

ಬೆಂಗಳೂರಿನಲ್ಲಿ ಕನ್ನಡ
ಕನ್ನಡಿಯೊಳಗಿನ
ಚಿನ್ನದ ಗಂಟು.
ಹೊರಗು
ಅಳಿದುಳಿದದ್ದು
ಅಲ್ಪ ಸ್ವಲ್ಪ ಅಲ್ಲಲ್ಲಿ ಉಂಟು.


ಪರ ರಾಜ್ಯದ ಕನ್ನಡಿಗರು 

ಮೊನ್ನೆ ಪರ ರಾಜ್ಯದವರೊಬ್ಬರು
ಅರ್ಧಂಬರ್ಧ ಕನ್ನಡದಲ್ಲಿ
ಮಾತಾಡಲು ಶುರುವಿಟ್ಟರು,
ಖುಷಿಯಿಂದ ಹೇಳಿದೆ
ಈ ಬಾರಿಯ ರಾಜ್ಯೋತ್ಸವ
ಪ್ರಶಸ್ತಿ ನಿಮಗೇ ಕೊಟ್ಟಾರು!!



ಕಾನ್ವೆಂಟ್ ನ ಕಂದ 

ಕಾನ್ವೆಂಟಿಗೆ ಸೇರಿಸುವಾಗ
ಕಂದನ ಕೇಳಿದರು,
"ನಿನಗೆ ಇಂಗ್ಲಿಷ್ ಗೊತ್ತಾ ?"
ಇಲ್ಲವೆಂದು ತಲೆಯಾಡಿಸಿದ
ಕನ್ನಡದ ಪೋರ,
"ಸರಿ ನಾವು ಕಳಿಸಿ ಕೊಡುತ್ತೇವೆ"
"ನಿನಗೆ ಕನ್ನಡ ಗೊತ್ತೇ ?"
ಹೌದೆಂದ ಹೆಮ್ಮೆಯಿಂದ.
"ಸರಿ ನಾವು ಮರೆಸಿ ಬಿಡುತ್ತೇವೆ" .


ಕನ್ನಡದ ಮೇಲೆ ಕಾಗೆ, ಗೂಬೆ 

ಮೊನ್ನೆ ಹೀಗೆ
ಕಾಗೆ
ಕನ್ನಡದ ಬಾವುಟದ
ಕಂಬದಲ್ಲಿ ಕೂತಿತ್ತು,
ಓಡಿಸಲು ಕಲ್ಲೆಸೆದೆ
ಮಿಟುಕಾಡಲಿಲ್ಲ .
ಸುತ್ತ ಜನ ಸೇರಿದರು
ಕನ್ನಡದ ಬಾವುಟಕ್ಕೆ
ಕಲ್ಲೆಸೆದು
ಅವಮಾನ ಮಾಡಿದೆನೆಂದರು,
ಕೋರ್ಟು ಮುಂದೆ ನಿಂತೆ .
"ಬಾವುಟದ ಮೇಲೆ ಕುಳಿತ
ಕಾಗೆ ಓಡಿಸುತಿದ್ದೆ ಜನ ತಪ್ಪು ತಿಳಿದರು " ಅಂದೆ .

ತಕ್ಕಡಿ ನನ್ನ ಕಡೆ ತೂಗಿತು
"ಸರಿ ಆ ಕಾಗೆಯನ್ನು ಹಿಡಿದು ತನ್ನಿ"
ನಗುತ್ತಾ ಆಜ್ಞಾಪಿಸಿದರು
ಜಡ್ಜ್ ಸಾಹೇಬರು .

"ನೀವು ಬನ್ನಿ ಕಾಗೆ ಓಡಿಸುದು ತಪ್ಪಲ್ಲ"

ಪುಸ್ತಕದ ಅಂಗಡಿಯಲ್ಲಿ

ಒಂದು ಕನ್ನಡ ಪುಸ್ತಕ ಕೊಡಿ,
ಇನ್ನಾದರೂ ಶುರುಮಾಡೋಣ
ಓದಲು
ನಮ್ಮ ನಾಡು ನುಡಿ.


ಕನ್ನಡಿಗ 
ಗೊತ್ತೇ ನಿನಗೆ
ಕುವೆಂಪು, ಮಾಸ್ತಿ,ಅಡಿಗ?
ಗೊತ್ತಿಲ್ವೆ ?
ನೀ ಯಾವ ಸೀಮೆ ಕನ್ನಡಿಗ!!!



---------------------------------------------------------------------ಸುಕೇಶ್ ಪೂಜಾರಿ 



Saturday, September 9, 2017

ಹೀಗೊಂದು ಸ್ವಗತ

ನೆನಪು ಅರ್ಧ ಬೆಂದ ಜೋಳ
ಮನಸು ಹಸಿದ ತೋಳ
ಬದುಕು ತಳ್ಳೋ ಗಾಡಿ
ಎದೆಯಲ್ಲಿ ನಿಗಿ ನಿಗಿ ಕೆಂಡ, ಕಿಡಿ
ಯಾರೋ ಮೆಲ್ಲಗೆ
ಗಾಳಿ ಹಾಯುತಿದ್ದಾರೆ

ಗಾಡಿ ಸುತ್ತ ನಿಂತ ಜನ
ಜಾತ್ರೆಯಂತೂ ಅಲ್ಲ
ಇಲ್ಲಿ ಸುಟ್ಟ ನೆನಪುಗಳಿಗೆ
ಬೇಡಿಕೆ ಜಾಸ್ತಿ
ಕೆಲವರಂತೂ
ಉಪ್ಪು-ಖಾರ ಹಚ್ಚಿಕೊಳ್ಳುತ್ತಾರೆ.
ಹೊಗೆ ನೆಪ,
ಸುಟ್ಟುಕೊಳ್ಳಲು ಕಾರಣ
ಅದು ನನ್ನ ಮೇಲಿನ ಕೋಪ.

ಜನ ದೂರ ಹೋದಾಗ
ಕೂಗಿ ಕರೆಯೋಣವೆಂದುಕೊಂಡೆ
ತಳ್ಳೋ ಗಾಡಿಯ ಕೀರಲು ಶಬ್ದಕ್ಕೆ
ನನ್ನ ಬೊಬ್ಬೆ ಯಾರಿಗೂ ಕೇಳಲೇ ಇಲ್ಲ
ಕೆಲವರದಂತೂ
ಕಿವುಡತೆಯ ನಾಟಕಕ್ಕೆ,
ನಾನು ಬಯಲು ರಂಗಮಂದಿರ.

ಮೇಲೆ ಯಾಕೋ ಮೋಡ
ಅಳಲು ಶುರುಮಾಡುದರಲ್ಲಿತ್ತು.
ಕಿಡಿ ಆರುವ ಹೊತ್ತು
ಪಕ್ಕದಲ್ಲಿ ಯಾರೋ
ಹಾಗೇ ನಡೆದು ಹೋದ ಹಾಗಿತ್ತು
ಮತ್ತೆ ತಿರುಗಿ ನೋಡದೆ.
ಖಾಲಿ ಗಾಡಿ ,
ಎಂದಿಗಿಂತ ಸ್ವಲ್ಪ ಹಗುರ,
ಹೆಜ್ಜೆ ಯಾಕೋ ಕೊಂಚ ಭಾರ. 

ನೆನಪು ಅರ್ಧ ಬೆಂದ ಜೋಳ
ಮನಸು ಹಸಿದ ತೋಳ
ಬದುಕು ತಳ್ಳೋ ಗಾಡಿ
ತಳ್ಳುತಿದ್ದೇನೆ ಮತ್ತೆ ಪ್ರಯತ್ನ ಮಾಡಿ!!!.




----------------------------------------------------------ಸುಕೇಶ್




ಅಗ್ನಿಯ ಬಟ್ಟಲು

ಹೆಣ ಸುಡುವ ಬಿಸಿಲು ಕಾಯುತಿತ್ತು ಹೆಣ ಸುಡಲು ನೆಲವ  ಅಗೆದು ಯಾರೋ ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು ವಿವಿಧ ಭಕ್ಷ್ಯ  ...