Saturday, July 29, 2017

ವಿದ್ಯುತ್ ತಂತಿ



ಎತ್ತರದ ಕಂಬಗಳಲ್ಲಿ
ಸದ್ದೇ ಮಾಡದೆ ಹರಿದಾಡಿ
ಅಲ್ಲಲ್ಲಿ, ಗಲ್ಲಿಗಳಲ್ಲಿ
ಕಾರ್ಖಾನೆಗಳಲ್ಲಿ
ಕೊಳೆಗೇರಿ ಬೀದಿಯ
ಗುಡಿಸಲುಗಳಲ್ಲಿ,
ಸಂಚಲನ ಮಾಡುವವೆ
ತಂತಿ ಕೊನೆಗೆ ಇಳಿಬಿಟ್ಟ
ದೀಪದೊಳಗೆ.

ಯಾರದೋ ವಿಶಾಲ ಚಾದರಗಳ
ಒಣಗಿಸಲು
ಹಗ್ಗ ಎಳೆದಂತೆ
ಕಂಬದಿಂದ ಕಂಬದ ಹೆಗಲಿಗೆ .
ಕಾಮಗಾರಿ  ಪ್ರಗತಿಯಲ್ಲಿದೆ
ಕತ್ತಲೆ ಓಡಿಸಲು .


ಪಾಳು  ಬಿದ್ದ ತಂತಿ ಮೇಲೆ
ಶಕ್ತಿ ಸಂಚಲನದ ಅಲೆ.
ಕಾಯೋ ಜನ ಗುಂಡಿ ಕೈಯಲ್ಲಿ ಹಿಡಿದು
ಹಳೇ ಬಲ್ಬು  ಉರಿವ ವೇಳೆಗೆ,
ಕಣ್ಣ ತುಂಬಾ ಒಮ್ಮೆ
ದೇವರ ಗುಡಿಯ
ಕೆಂಪಗಿನ ದೀಪ ನೋಡುವಾಸೆಗೆ.

ಗೋಡೆಗೆ ನೇತಾಡುವ ಲಾಂದ್ರ
ಅಪಶಕುನವೆಂಬಂತೆ
ಗಾಳಿಯಲಿ ತೂರಾಡಿತು
ಎಣ್ಣೆ  ಕುಡಿದ ಅಮಲಿಗೆ!.
ಮೂಲೆಯಲಿ ಕೂತ
ಅಜ್ಜಿಯ ಕೋಲು,
ಮತ್ತು ,ಜಪ್ಪಯ್ಯ ಎಂದರು
ಮೇಲೇಳದ ಕಾಲು
ಗಳ ನಡುವೆ
ನಿಸ್ತಂತು ವ್ಯವಹಾರ
ಎಂದೋ ಮುಗಿದ ಸಮಾಚಾರ.

ಕಣ್ಣ, ಬುರುಡೆ ದೀಪ  
ಆರೋ ಹೊತ್ತು
ಎದೆಯ ಬಾಗಿಲು ತೆರೆದು 
ಹಕ್ಕಿ ಹಾರಿತ್ತು.



ದುಡ್ಡು ತಿಂದ ಮಂತ್ರಿ
ಕುತಂತ್ರಿ.
ನಿಂತ ಕಾಮಗಾರಿ,
ಕತ್ತಲೊಳಗೆ ಕೊಳೆಗೇರಿ,
ಮೂಡದ ಸಂಚಲನ
ಅರ್ಥವಾಗದ ವ್ಯವಕಲನ.

ಗೋಡೆಬದಿಗೆ
ಜೋತುಬಿದ್ದ(ಸೋತು ಬಿದ್ದ),
ಹಳೇ ಸೀಮೆಎಣ್ಣೆ ದೀಪ
ಎಷ್ಟು  ಹೋರಾಡುದು
ಅದು ಪಾಪ.

ಜಡ, ಚೇತನ
ಮರಣ ,ಜನನ .

--------------------------------------------------------------ಸುಕೇಶ್








ಸಾಕ್ಷಾತ್ಕಾರ

ನವದ್ವಾರಗಳ ನಗರ
ತಲೆ ಗೋಪುರ 
ಕಂಡು ಕಾಣದೆ 
ಸುಮ್ಮನಿರುದೇ ಕಣ್ಣು 
ಕೇಳಿಯು ಕೇಳದಂತಿರಲು 
ಕಿವಿಗೆ ಭೋದಿಸಿ . 

ಎದೆ ಹೊಡೆವ ಘಂಟೆ,
ರಕ್ತದ ಚಲನೆ 
ಶುದ್ಧ,ಕಲ್ಮಶಗಳ ನಡುವೆ.  
ಒಂದೆಡೆ ನಿಲ್ಲದ ಕಾಲು 
ನಗರವನ್ನೇ ಎತ್ತಿ ಸಾಗಿದೆ 
ಅಲ್ಲಿಂದ ಇಲ್ಲಿಗೆ 
ಇಲ್ಲಿಂದ ಎಲ್ಲಿಗೆ? . 

ಮೌನಿಯಾಗದ ಬಾಯಿ 
ಬತ್ತದ ಕೊಳವೆ ಬಾವಿ,
ಮುಚ್ಚಿಕೊಂಡರೆ ನಗರವೇ 
ಖಾಲಿ,ಖಾಲಿ,ನೀರವ 
ಬಂಧಿ ಹಕ್ಕಿಯ ಗುಟುರಿಗೆ 
ನಗರದ ಮೂಲೆ, ಮೂಲೆ,
ಪ್ರತಿಧ್ವನಿಗಳ ಸ್ಥಾವರ. 


ಎಲ್ಲ ಕಡೆ ತೋರುವ ಮೂಗು,
ಎಲ್ಲ ಕಲಿವ ಹಂಬಲದ ಮಗು. 
ಗದರಿಸಿ,ಮಲಗಿಸಿ 
ಹೆಗಲಿಗೇರಿಸಿಕೊಂಡರೆ 
ಗಾಳಿ ಚೀಲ 
ನಾ ಹರಕಲು ಕುಚೇಲ. 

ನಗರ ನಿನ್ನದು 
ನನಗೆ ಒಂದಷ್ಟು  ದಿನದ ಗುತ್ತಿಗೆ 
ಮರೆತು,
ಸುಖಾಸುಮ್ಮನೆ ಮಲಗಿದ್ದೆ. 
ಎಬ್ಬಿಸು,ಉದ್ಧರಿಸು,
ಶುದ್ದೀಕರಿಸು,
ನಿನ್ನ  ಸಾಕ್ಷಾತ್ಕಾರದ ಭಕ್ತಿಗೆ,
ಮುಕ್ತಿಗೆ. 


--------------------------------------------------------------------------ಸುಕೇಶ್ 

ಅಗ್ನಿಯ ಬಟ್ಟಲು

ಹೆಣ ಸುಡುವ ಬಿಸಿಲು ಕಾಯುತಿತ್ತು ಹೆಣ ಸುಡಲು ನೆಲವ  ಅಗೆದು ಯಾರೋ ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು ವಿವಿಧ ಭಕ್ಷ್ಯ  ...